ಬೈತಡ್ಕ,ಕಾರು ಹೊಳೆಗೆ ಬಿದ್ದ ಪ್ರಕರಣ: ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ

ಸವಣೂರು : ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಕಾರು ಹೊಳೆಗೆ ಬಿದ್ದ ಪ್ರಕರಣವೂ ಸಾರ್ವಜನಿಕವಾಗಿ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ, ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕೆಂದು ಎಸ್‌ಡಿಪಿಐ ಸವಣೂರು ಬ್ಲಾಕ್ ಅಧ್ಯಕ್ಷರಾದ ಯೂಸುಫ್ ಹಾಜಿ ಬೇರಿಕೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕಳೆದ ಶನಿವಾರ ರಾತ್ರಿ 12 ಗಂಟೆಯ ಸಮಯದಲ್ಲಿ ವಿಟ್ಲ ಮೂಲದ ಮಾರುತಿ ಕಾರೊಂದು ಅತೀ ವೇಗದ ಚಾಲನೆಯಿಂದ ಬೈತಡ್ಕ ಮಸೀದಿ ಸಮೀಪದ ಹೊಳೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂಶಯಗಳು ಸಾರ್ವಜನಿಕರೆಡೆಯಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಕಾರಿನಲ್ಲಿದ್ದ ಧನುಷ್ ತನ್ನ ಮನೆಯವರಿಗೆ ಕರೆ ಮಾಡಿ ತಾವೂ ಆಲಂಕಾರಿನಲ್ಲಿದ್ದೇವೆಂದು,ಕಾರು ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿರುವುದಾಗಿ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಅದೇ ರೀತಿ ಸವಣೂರು ಚೆಕ್ ಪೋಸ್ಟ್ ನಲ್ಲಿ ಪೋಲೀಸರೊಂದಿಗೆ ಕೂಡ ಗುತ್ತಿಗಾರಿಗೆ ಹೋಗುವುದೆಂದು ಹಾಗೂ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ಕೊಟ್ಟು ಅಸ್ಪಷ್ಟ ಮಾಹಿತಿ ನೀಡಿದ್ದಾರೆ. ಗುತ್ತಿಗಾರಿಗೆ ಹೋಗುವುದಾದರೆ ಪುತ್ತೂರು-ಜಾಲ್ಸೂರು ಮಾರ್ಗ ಹತ್ತಿರದ ರಸ್ತೆ ಆಗಿರುವಾಗ ಈ ಮಾರ್ಗವಾಗಿ ಬರುವ ಅಗತ್ಯವೇನಿತ್ತು?
ಅದೇ ರೀತಿ ಮನೆಯವರ ಬಳಿ ಅಪಘಾತ ವಾಗಿದೆ ಎಂದು ಸುಳ್ಳು ಹೇಳಿರುವುದು ಯಾಕೆ?
ಅಥವಾ ಬೇರೇನಾದರು ಸಮಾಜಘಾತುಕ ಕೆಲಸಕ್ಕೆ ಬಂದವರೇ?
ಇಂತಹ ಹಲವಾರು ಸಂಶಯಗಳು ಜನರೆಡೆಯಲ್ಲಿ ಚರ್ಚೆಯ ವಿಷಯವಾಗಿದೆ.ಹಾಗಾಗಿ ಪೋಲೀಸ್ ಇಲಾಖೆ ಈ ಪ್ರಕರಣವನ್ನು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಈ ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಹಾಗೂ ನಾಪತ್ತೆಯಾಗಿರುವ ಯುವಕರು ಆದಷ್ಟು ಬೇಗ ಪತ್ತೆಯಾಗಿ ಪ್ರಕರಣವು ಸುಖಾಂತ್ಯವಾಗಲಿ ಎಂದು ಅವರು ಹಾರೈಸಿದ್ದಾರೆ.

Leave A Reply

Your email address will not be published.