ಸಹೋದರನ ಶವವನ್ನು ಮಡಿಲಲ್ಲಿ ಮಲಗಿಸಿಕೊಂಡು ರಸ್ತೆ ಬದಿ ಕುಳಿತಿರುವ 8 ವರ್ಷದ ಬಾಲಕ

ಬದುಕು ಎಷ್ಟು ವಿಚಿತ್ರ ಎಂಬುದನ್ನು ಸಾರಿ ಹೇಳುತ್ತಿದೆ ಈ ಘಟನೆ. ಈ ಪ್ರಪಂಚದಲ್ಲಿ ದುಡ್ಡಿದ್ದವನೆ ದೊಡ್ಡಪ್ಪ. ಯಾಕಂದ್ರೆ ಇಲ್ಲಿ ಸಾವು ಬಂದರೂ ಹಣದ ಕಡೆಗೆ ಮುಖ ಹಾಕುವವರೇ ಹೆಚ್ಚು. ಅಂತಹುದೇ ಒಂದು ಮನಸ್ಸು ಕರಗಿಸುವ ಘಟನೆ ಮಧ್ಯಪ್ರದೇಶದ ಮೊರೆನಾ ಪಟ್ಟಣದಲ್ಲಿ ನಡೆದಿದೆ.

ಏನೂ ಅರಿಯದ 8 ವರ್ಷದ ಮುಗ್ಧ ಬಾಲಕ , ತನ್ನ ತಮ್ಮನ ಶವವನ್ನು ಮಡಿಲಲ್ಲಿ ಮಲಗಿಸಿಕೊಂಡು ರಸ್ತೆ ಬದಿ ಕುಳಿತಿರುವ ದೃಶ್ಯ ಕಂಡುಬಂದಿದೆ. ಅತ್ತ ತಂದೆ, ಮಗನ ಶವವನ್ನು ಮನೆಗೆ ಕೆರೆದೊಯ್ಯಲು ವಾಹನ ಹುಡುಕುತ್ತಿದ್ದಾರೆ. ಇವರ ಈ ಪರಿಸ್ಥಿತಿಗೆ ಕಾರಣ ದುಡ್ಡಿಗೆ ಮಹತ್ವ ಕೊಡುವ ಆಸ್ಪತ್ರೆಯ ಆಡಳಿತ.

ಹೌದು. ಈ ದೃಶ್ಯವನ್ನು ಸ್ಥಳೀಯ ಪತ್ರಕರ್ತರೊಬ್ಬರು ಚಿತ್ರೀಕರಿಸಿದ್ದು, ತಂದೆ ಪೂಜಾರಾಮ್ ಜಾತವ್ ಶವವನ್ನು ಮನೆಗೆ ಕರೆದೊಯ್ಯಲು ವಾಹನಕ್ಕಾಗಿ ತೀವ್ರವಾಗಿ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ 8 ವರ್ಷದ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜನ ಶವದೊಂದಿಗೆ ಕುಳಿತಿರುವುದು ಕಂಡುಬಂದಿದೆ.

ಅಂಬಾಹ್‌ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಅವರ 2 ವರ್ಷದ ಮಗ ರಾಜ ರಕ್ತಹೀನತೆ ಮತ್ತು ಅಸ್ಸೈಟ್ಸ್‌ನಿಂದ ಬಳಲುತ್ತಿದ್ದ. ಹೀಗಾಗಿ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರ ಸಲಹೆ ಮೇರೆಗೆ 450 ಕಿಮೀ ದೂರದಲ್ಲಿರುವ ಮೊರೆನಾ ಜಿಲ್ಲಾ ಆಸ್ಪತ್ರೆಗೆ ರಾಜನನ್ನು ಕರೆದುಕೊಂಡು ಹೋಗಲಾಗಿತ್ತು. ಆದ್ರೆ, ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ, ಅವರನ್ನು ಕರೆತಂದಿದ್ದ ಆಂಬ್ಯುಲೆನ್ಸ್ ಆಗಲೇ ಹಿಂತಿರುಗಿತ್ತು.

ನಂತರ, ತನ್ನ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲು ವಾಹನಬೇಕೆಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಪೂಜಾರಾಮ್ ಮನವಿ ಮಾಡಿದರು. ಆದ್ರೆ, ಇದಕ್ಕೆ ಅಧಿಕಾರಿಗಳು ಹೆಚ್ಚುವರಿಯಾಗಿ 1,500 ರೂ. ಹಣ ಪಾವತಿಸಬೇಕಾಗುತ್ತದೆ ಎಂದಿದ್ದಾರೆ. ಅಷ್ಟೊಂದು ಹಣವಿಲ್ಲದ ಪೂಜಾರಾಮ್, ಬೇರೆ ವಾಹನದ ವ್ಯವಸ್ಥೆಗೆಂದು ಅಲೆದಾಡುತ್ತಿದ್ದರು. ಈ ವೇಳೆ ಮೊರೆನಾದ ನೆಹರೂ ಪಾರ್ಕ್‌ನ ರಸ್ತೆ ಮುಂದೆ 8 ವರ್ಷದ ಬಾಲಕ ತನ್ನ ತಮ್ಮನ ಮೃತದೇಹವನ್ನು ತನ್ನ ಮಡಿಲಲ್ಲಿ ಮೇಲೆ ಮಲಗಿಸಿಕೊಂಡಿರುವ ದೃಶ್ಯ ಕಂಡುಬಂದಿದೆ. ಕರುಣಾದ್ರ ಸನ್ನಿವೇಶ ಹಲವರ ಕಣ್ಣಲ್ಲಿ ಹನಿ ಒಗ್ಗೂಡಿಸಿದೆ.

ಈ ಬಗ್ಗೆ ಅಲ್ಲಿದ್ದ ಜನರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕೊತ್ವಾಲಿ ಠಾಣೆಯ ಪೊಲೀಸ್​ ಅಧಿಕಾರಿ ಯೋಗೇಂದ್ರ ಸಿಂಗ್ ಸ್ಥಳಕ್ಕೆ ಆಗಮಿಸಿ, ಬಾಲಕನ ಮಡಿಲಿನಲ್ಲಿದ್ದ ಮೃತ ದೇಹವನ್ನು ಎತ್ತಿಕೊಂಡು ಆಸ್ಪತ್ರೆಯೊಳಗೆ ಕರೆದೊಯ್ದು, ಅಲ್ಲಿನ ಸಿಬ್ಬಂದಿಗಳ ನಡತೆಗೆ ಛೀಮಾರಿ ಹಾಕಿದ್ದಾರೆ. ನಂತರ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಬಾಲಕನ ಮೃತದೇಹವನ್ನು ಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

Leave A Reply

Your email address will not be published.