ಗಂಡನ ಶವವನ್ನು ಮನೆಯಲ್ಲಿ ಬಿಟ್ಟು ತಹಶೀಲ್ದಾರ್​ ಕಚೇರಿಗೆ ತೆರಳಿದ ಇಬ್ಬರು ಪತ್ನಿಯರು!!, ಕಾರಣ?

ಜಗತ್ತು ಎಷ್ಟು ವಿಭಿನ್ನವಾಗಿದೆ ಅಂದರೆ, ಇಲ್ಲಿ ಮನುಷ್ಯನ ಪ್ರೀತಿಗಿಂತಲೂ ಹೆಚ್ಚು ಸ್ವಾರ್ಥವೇ ಎದ್ದುಕಾಣುತ್ತಿದೆ. ಸಂಬಂಧವೆಂಬ ಕೊಂಡಿಯಲ್ಲಿ ಪ್ರೀತಿ ಮರೆಮಾಚಿ, ಆಸ್ತಿ-ಅಂತಸ್ತು ಎಂಬ ಮೋಹ ಹುಟ್ಟಿಕೊಂಡಿದೆ. ಓಡ ಹುಟ್ಟಿದ ಅಣ್ಣ-ತಮ್ಮ, ಅಕ್ಕ-ತಂಗಿಯಂದಿರು ಒಟ್ಟಾಗಿ ಒಡನಾಟದೊಂದಿದೆ ಸುಂದರ ಜೀವನ ಕಳೆಯುವ ಬದಲು ಆಸ್ತಿ, ದುಡ್ಡು ಎಂದು ಒಡಹುಟ್ಟಿದವರನ್ನೇ ಕತ್ತಿಯಿಂದ ಹಲ್ಲೆ ಮಾಡಿದಂತಹ ಅದೆಷ್ಟೋ ಘಟನೆಗಳು ನಡೆದಿದೆ.

ಹೌದು. ಇದೀಗ ಇದೆ ಸಾಲಿಗೆ ಗಂಡ-ಹೆಂಡತಿಯಂದಿರ ಸಂಬಂಧವೂ ಸೇರಿಕೊಂಡಿದೆ. ಸಾವನ್ನಪ್ಪಿದ ಗಂಡನ ಶವದ ಮುಂದೆ ಆಸ್ತಿಗಾಗಿ ಇಬ್ಬರು ಪತ್ನಿಯಂದಿರು ಹೊಡೆದಾಡಿಕೊಂಡ ಘಟನೆ ಕೋರುಟ್ಲ ತಾಲೂಕಿನ ಐಲಾಪೂರ್​ ಗ್ರಾಮದಲ್ಲಿ ನಡೆದಿದೆ.

ಗಂಡ ಸಾವನ್ನಪ್ಪಿದ್ದು, ಹೆಂಡ್ತಿಯರಿಬ್ಬರು ತಮ್ಮ ಗಂಡನ ಅಂತ್ಯಕ್ರಿಯೆಗೆ ಅಡ್ಡಿಪಡಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಮೃತ ಪತಿಯ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಪತ್ನಿಯರಿಬ್ಬರು ಆಸ್ತಿ ಹಂಚಿಕೆಗೋಸ್ಕರ ಅಡ್ಡಿಪಡಿಸಿದ್ದಾರೆ. ಗ್ರಾಮದ ನಿವಾಸಿ ನರಸಿಂಹುಲು ಕೆಲ ದಿನಗಳಿಂದ ಕೋರುಟ್ಲದಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಹೆಂಡತಿಯರು. ನರಸಿಂಹುಲು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸಂಪ್ರದಾಯದ ಪ್ರಕಾರ, ಅವರ ಅಂತಿಮ ವಿಧಿವಿಧಾನಗಳನ್ನು ಪತ್ನಿಯರಿಬ್ಬರು ಒಂದಾಗಿ ನೆರವೇರಿಸಬೇಕಾಗಿತ್ತು. ಆದ್ರೆ ಆಸ್ತಿಯಲ್ಲಿ ಪಾಲಿಗಾಗಿ ಇಬ್ಬರು ಹೆಂಡತಿಯರು ಮೃತದೇಹದ ಮುಂದೆ ಜಗಳವಾಡಿದ್ದಾರೆ.

ಪತಿಯ ಆಸ್ತಿ ಹಸ್ತಾಂತರ ವಿಷಯದಲ್ಲಿ ಎರಡನೇ ಪತ್ನಿ ಭಾರತಿಗೆ ಅನ್ಯಾಯವಾಗಲಿದೆ ಎಂಬ ಉದ್ದೇಶದಿಂದ ಇಬ್ಬರ ಪರವಾಗಿ ಹಿರಿಯರು, ಸಂಬಂಧಿಕರು ಮಧ್ಯಪ್ರವೇಶಿಸಿ ಮೂರು ಎಕರೆ ಕೃಷಿ ಭೂಮಿ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದ್ರೂ ಸಹ ಇದು ಇಲ್ಲಿಗೆ ಮುಗಿಯಲಿಲ್ಲ. ಜಮೀನು ನೋಂದಣಿಯಾಗುವವರೆಗೆ ಅಂತ್ಯಕ್ರಿಯೆ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಭಾರತಿ ಹಠ ಹಿಡಿದಿದ್ದಾರೆ.

ಹೀಗಾಗಿ, ಅವರಿಬ್ಬರು ತಮ್ಮ ಗಂಡನ ಮೃತದೇಹವನ್ನು ಮನೆಯಲ್ಲೇ ಬಿಟ್ಟು ಆಸ್ತಿ ನೋಂದಣಿಗಾಗಿ ತಹಶೀಲ್ದಾರ್​ ಕಚೇರಿಗೆ ತೆರಳಿದ್ದರು. ಮೊದಲ ಪತ್ನಿ ಹೆಸರಲ್ಲಿದ್ದ ಮೂರು ಎಕರೆ ಕೃಷಿ ಜಮೀನು ಎರಡನೇ ಪತ್ನಿ ಹೆಸರಿಗೆ ವರ್ಗಾವಣೆಯಾದ ಬಳಿಕ ಮನೆಗೆ ಬಂದು ಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Leave A Reply

Your email address will not be published.