ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನಿಗೆ ‘ಪರಿಸರ ರಾಯಭಾರಿ’ ಗೌರವದ ಜೊತೆ ರಾಜ್ಯ ಸಂಪುಟ ದರ್ಜೆಯಲ್ಲಿ ಸ್ಥಾನಮಾನ!

ಮರಗಳನ್ನು ಬೆಳೆಸಿ ವೃಕ್ಷ ಮಾತೆ ಎಂದು ಖ್ಯಾತಿ ಹೊಂದಿರುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದಲ್ಲದೇ, ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶಿಸಿದೆ.

ತಿಮ್ಮಕ್ಕ ರಾಯಭಾರಿಯಾಗಿರುವುದರಿಂದ ರಾಜ್ಯ, ಅಂತರ್ ರಾಜ್ಯ ಪ್ರವಾಸ ಕೈಗೊಂಡಾಗ ಅದರ ಖರ್ಚು ವೆಚ್ಚ ರಾಜ್ಯ ಸರ್ಕಾರ ಭರಿಸಲಿದೆ. ಅಲ್ಲದೇ ಅವರಿಗೆ ಈಗಾಗಲೇ ನೀಡಿರುವ ಬಿಡಿಒ ನಿವಾಸದಲ್ಲಿ ಮನೆ ಕೂಡ ಕಟ್ಟಿ ಕೊಡುವ ವ್ಯವಸ್ಥೆ ರಾಜ್ಯ ಸರ್ಕಾರ ಮಾಡಲಿದ್ದು, ಜೊತೆಗೆ ಸರ್ಕಾರ 10 ಎಕರೆ ಜಮೀನು ನೀಡಲಿದೆ ಎಂದು ಪ್ರಕಟಿಸಿಸಲಾಗಿದೆ.

ಇತ್ತೀಚೆಗಷ್ಟೇ ಧಾರವಾಡ ಜಿಲ್ಲೆಯ ನವಲೂರಿನಲ್ಲಿ ಸಾಲು ಮರದ ತಿಮ್ಮಕ್ಕ ಹೆಸರಿನ ವನ ಕೂಡ ಉದ್ಘಾಟನೆಯಾಗಿತ್ತು. ತಿಮ್ಮಕ್ಕ ಅವರ ಜೀವನ ಬೆಳಕು ಮೇಲೆ ಚೆಲ್ಲುವ ಬಗ್ಗೆ ವೆಬ್ ಸೈಟ್ ಮತ್ತು ತಿಮ್ಮಕ್ಕ ಸೇರಿದಂತೆ ರಾಜ್ಯದಲ್ಲಿ ಇರುವ ಇತರ ಸಾಧಕರನ್ನು ಪರಿಚಯಿಸುವ ವೆಬ್ ಸಿರೀಸ್ ರೂಪಿಸುವಂತೆ ಮುಖ್ಯ ಮಂತ್ರಿ ಬೊಮ್ಮಾಯಿ ಈಗಾಗಲೇ ವಾರ್ತಾ ಇಲಾಖೆಗೆ ಸೂಚಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದವರು. ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಅಲ್ಲದೆ ಇವರು ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾರೆ. ಒಟ್ಟಾರೆ ಇವರ ಪರಿಸರದ ಮೇಲಿನ ಪ್ರೀತಿ, ಆರೈಕೆ ನೂರಾರು ಯುವ ಜನತೆಗೆ ಸ್ಫೂರ್ತಿ..

Leave A Reply

Your email address will not be published.