ಮಿಸ್ಡ್ ಕಾಲ್ ರಾಣಿ | ಬೆಳದಿಂಗಳ‌ ಬಾಲೆಗೆ ಮನಸೋತ ಯುವಕ, ಬರ್ಬರ ಹತ್ಯೆಗೀಡಾದ!

ಪ್ರೀತಿಯೋ ಮಾಯೆಯೋ ಮೋಹವೋ ಅಂತೂ ಇಲ್ಲಿ ನಡೆದಿರುವುದು ಒಂದು ಭಯಾನಕ ಕೊಲೆ. ಅದೂ ಅನೈತಿಕ ಸಂಬಂಧದಿಂದಾಗಿ ಓರ್ವ ಯುವಕ ತನ್ನ ಪ್ರಾಣವನ್ನೇ ಕಳೆದುಕೊಂಡ‌ ಘಟನೆ ನಡೆದಿದೆ. ಅನೈತಿಕ ಸಂಬಂಧಕ್ಕೆ ಅನೇಕ ಕೊಲೆಗಳು ನಡೆದಿದೆ. ಆದರೆ ಈ ಕೊಲೆ ಮಾತ್ರ ನಡೆದಿರುವುದು ಪ್ರೀಪ್ಲಾನ್ಡ್ ಆಗಿ. ಅದು ಕೂಡಾ ಎಂತಾ ಪ್ಲ್ಯಾನ್ ಗೊತ್ತಾ ? ಸೂಪರ್ ಥ್ರಿಲ್ಲರ್ ಸ್ಟೋರಿ ಮೀರಿಸುವಂತಿದೆ ಈ ಕಹಾನಿ. ಏನದು? ಮುಂದೆ‌ ಓದಿ

ಕಲ್ಬುರ್ಗಿ ನಗರದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಕಳೆದ ಮೇ 24ರಂದು ಯುವಕನೋರ್ವರ ಬರ್ಬರ ಹತ್ಯೆವೊಂದು ಆಗುತ್ತದೆ. ಕೊಲೆಯಾದ ಯುವಕ ಯಾರು ಎನ್ನುವುದು ಪೊಲೀಸರು ಪತ್ತೆ ಮಾಡಿದಾಗ ಆತ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ನಿವಾಸಿ ಎನ್ನುವುದು ಬಯಲಾಗುತ್ತದೆ.

ಶುಕ್ರವಾಡಿ ಗ್ರಾಮದ ದಯಾನಂದ್ ಕೊಲೆಯಾದ ದುರ್ದೈವಿಯಾಗಿರುತ್ತಾನೆ. ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದ ಈತ ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಭಾರತಕ್ಕೆ ವಾಪಸ್ ಬಂದಿದ್ದ. ನಂತರ ಮರಳಿ ದುಬೈಗೆ ತೆರಳಲು ಪಾಸ್ ಪೋರ್ಟ್ ರೆಡಿ ಮಾಡಿಕೊಳ್ಳಲು ಕಲ್ಬುರ್ಗಿಗೆ ಬಂದಿದ್ದಾಗ ಬರ್ಬರ ಹತ್ಯೆಯಾಗಿದ್ದಾನೆ.
ಕಲ್ಬುರ್ಗಿಯ ವಿಶ್ವವಿದ್ಯಾಲಯ ಪೊಲೀಸರು ದಯಾನಂದ್ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡುತ್ತಾರೆ. ತನಿಖೆಯಲ್ಲಿ ಅದೇ ಶುಕ್ರವಾಡಿ ಗ್ರಾಮದ ಅನಿಲ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಪೊಲೀಸರು ಅನೀಲ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಥೆ ಬೇರೆ ಇದೆ ಎನ್ನುವುದು ಬಯಲಾಗುತ್ತದೆ.

ಶುಕ್ರವಾಡಿ ಗ್ರಾಮದ ಅನಿಲ್ ಹಾಗೂ ಭಾರತೀಯ ಸೇನೆಯಲ್ಲಿರುವ ಆತನ ಸಹೋದರ ಸುನಿಲ್ ಇಬ್ಬರು ಸುಫಾರಿ ನೀಡಿ ಈ ದಯಾನಂದ ನನ್ನ ಕೊಲೆ ಮಾಡಿಸಿದ್ದಾರೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗುತ್ತದೆ. ಅಷ್ಟಕ್ಕೂ ಈ ಸಹೋದರರಿಂದ ದಯಾನಂದ ಕೆಳಗೆ ಸುಫಾರಿ ಪಡೆದದ್ದು ಯಾರು ಗೊತ್ತಾ ಗೊತ್ತಾ ? ಓರ್ವ ಮಹಿಳೆ. ಅಂತಿಂಥ ಮಹಿಳೆ ಅಲ್ಲ, ಆಕೆ ಕಲ್ಬುರ್ಗಿಯ ಒಬ್ಬ ಲೇಡಿ ಡಾನ್. ಈಕೆಯ ಹೆಸರು ಅಂಬಿಕಾ. ಕಲಬುರ್ಗಿಯ ಬಸವೇಶ್ವರ ಕಾಲೋನಿ ನಿವಾಸಿ. ಮೇಲಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಉದ್ಯೋಗಿ, ಅನಿಲ್ ಮತ್ತು ಸುನಿಲ್ ಸಹೋದರರಿಂದ ದಯಾನಂದ ಕೊಲೆಗೆ 3 ಲಕ್ಷ ರೂಪಾಯಿ ಸುಪಾರಿ ಪಡೆದು ಈ ಕೊಲೆ ಮಾಡಲು ಹೊರಟಿದ್ದಳು ಈ ಅಂಬಿಕಾ.

ಈ ಕೊಲೆಗೆ ಅಂಬಿಕಾ ಸುಫಾರಿ ಪಡೆದಿದ್ದೇ ತಡ ಕೊಲೆಗೆ ವ್ಯವಸ್ಥಿತ ಸಂಚು ರೂಪಿಸುತ್ತಾಳೆ. ಹೇಗಾದ್ರೂ ಮಾಡಿ ದಯಾನಂದನನ್ನು ಶುಕ್ರವಾಡಿಯಿಂದ ಕಲ್ಬುರ್ಗಿಗೆ ಬರುವ ಹಾಗೇ ಮಾಡಿ ನಂತರವೇ ಕೊಲೆ ಮಾಡಬೇಕು ಎನ್ನುವುದು ಆಕೆ ಸಂಚಿನ ಮುಖ್ಯ ಭಾಗವಾಗಿತ್ತು.

ಅದಕ್ಕಾಗಿ ಈಕೆ ಮಾಡಿದ್ದಾಳೆ ಒಂದು ಖತರ್ನಾಕ್ ಪ್ಲಾನ್ ತಾನು ಹೆಣ್ಣು ಎಂಬುದನ್ನು ಬಂಡವಾಳ ಮಾಡಿಕೊಂಡು, ದಯಾನಂದನ ನಂಬರಿಗೆ ಪದೇಪದೇ ಮಿಸ್ ಕಾಲ್ ಕೊಡುತ್ತಾಳೆ. ಆತ ಯಾರೀ ಬೆಳದಿಂಗಳ ಬಾಲೆ ಎಂದು ಆ ನಂಬರಿಗೆ ಕಾಲ್ ಮಾಡಿದಾಗ, ಮಾದಕ ಹೆಣ್ಣಿನ ಧ್ವನಿಗೆ ಮರುಳಾಗಿ ಹೋಗ್ತಾನೆ. ಕಲಬುರಗಿಗೆ ಬನ್ನಿ ಮೀಟ್ ಮಾಡುವ, ಜಾಲಿ ಮಾಡೋಣ ಅನ್ನೋ ಆಕೆಯ ಆಫರ್ ಹಿಂದೂ ಮುಂದು ನೋಡದೆ ಒಪ್ಪಿಕೊಳ್ಳುತ್ತಾನೆ. ಅಮಾಯಕ ದಯಾನಂದ ಹಿಂದು ಮುಂದು ನೋಡದೆ ಒಪ್ಪಿಕೊಳ್ಳುತ್ತಾನೆ.

ಮೇ 24ರಂದು ದಯಾನಂದ್, ತನ್ನ ಮನೆಯವರಿಗೆ ಪಾಸ್ಪೋರ್ಟ್ ರೆಡಿ ಮಾಡಿಕೊಳ್ಳಲು ಕಲ್ಬುರ್ಗಿಗೆ ತೆರಳುತ್ತಿರುವುದಾಗಿ ಹೇಳಿ ಶುಕ್ರವಾಡಿಯಿಂದ ಕಲ್ಬುರ್ಗಿಗೆ ಆಗಮಿಸುತ್ತಾನೆ. ಕಲ್ಬುರ್ಗಿಗೆ ಬಂದವನೇ ನೇರವಾಗಿ ಅಂಬಿಕಾ ಹೇಳಿದ ಜಾಗಕ್ಕೆ ತೆರಳುತ್ತಾನೆ. ಅಲ್ಲಿಂದ ಮುಂದೆ ನಡೆದಿದ್ದೆಲ್ಲಾ ಅಂಬಿಕಾ ಅಣತಿಯಂತೆ. ಅಂಬಿಕಾ ಸಿಕ್ಕಿದ್ದೆ ಸ್ವರ್ಗ ಅಂತ ದಯಾನಂದ ಆಕೆಯೊಂದಿಗೆ ಆಟೋ ಹತ್ತುತ್ತಾನೆ. ಆಕೆ ಆತನನ್ನು ನೇರವಾಗಿ ಕಲ್ಬುರ್ಗಿ ನಗರದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಗೆ ಕರೆದುಕೊಂಡು ಹೋಗುತ್ತಾಳೆ.

ಅದೊಂದು ಲೇಔಟ್‌ನ ನಿರ್ಜನ ಜಾಗ, ಅಂಬಿಕಾ ಕಾಲ ಕಳೆಯಲು ಬಂದವನಿಗೆ ಕೆಲವೇ ನಿಮಿಷಗಳಲ್ಲಿ ಶಾಕ್ ಕಾದಿತ್ತು. ಅಂಬಿಕಾ ಪ್ಲ್ಯಾನ್‌ನಂತೆ ಇವರ ಆಟೋವನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ಅಂಬಿಕಾಳ ಸಹಚರರು, ನಿರ್ಜನ ಪ್ರದೇಶದಲ್ಲಿ ಅಂಬಿಕಾಳ ಜೊತೆ ಕುಳಿತಿದ್ದ ದಯಾನಂದನ ಜೊತೆ ಜಗಳಕ್ಕೆ ಇಳಿಯುತ್ತಾರೆ. ನನ್ನ ಹುಡುಗಿಯೊಂದಿಗೆ ನೀ ಏಕೆ ಬಂದಿರುವೆ ಎನ್ನುವುದು ಜಗಳ ಆರಂಭಕ್ಕೆ ನೆಪವಾಗಿತ್ತು. ಕೆಲವೇ ನಿಮಿಷಗಳಲ್ಲಿ ಆತನ ಮೇಲೆ ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಕೊಲೆ ಮಾಡುತ್ತಾರೆ ಈ ನಾಲ್ವರು ಅಂಬಿಕಾಳ ಸಹಚರರು.

ಪ್ರೇಯಸಿಯ ಸೋಗಿನಲ್ಲಿ ದಯಾನಂದನನ್ನು ಕರೆಸಿದ ಅಂಬಿಕ, ಆತ ಕೊಲೆಯಾಗುವುದನ್ನು, ಆತನ ಕೂಗಾಟ ನರಳಾಟವನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಅದನ್ನು ಸುಪಾರಿ ಕೊಟ್ಟ ಸುನಿಲ್ ಮತ್ತು ಅನಿಲ್ ಸಹೋದರರಿಗೆ ವಾಟ್ಸಪ್ ಮೂಲಕ ಕಳಿಹಿಸಿ ಸುಫಾರಿಯ ಹಣ ಮೂರು ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾಳೆ.

ಈ ಅನಿಲ್ ಮತ್ತು ಸುನಿಲ್ ಸಹೋದರರ ಪೈಕಿ ಅನಿಲ್ ಶುಕ್ರವಾಡಿ ಗ್ರಾಮದಲ್ಲಿ ವಾಸವಿದ್ದರೆ ಸುನಿಲ್ ಭಾರತೀಯ ಸೇನೆಯಲ್ಲಿ ಯೋಧನಾಗಿ ಕೆಲಸ ಮಾಡುತ್ತಿದ್ದಾನೆ. ದಯಾನಂದ ನನ್ನ ಹೆಂಡತಿಯ ಜೊತೆ ಸಂಬಂಧ ಹೊಂದಿದ್ದಾನೆ. ಅಲ್ಲದೇ ಈ ಬಗ್ಗೆ ಊರಲ್ಲಿ ಹೇಳಿಕೊಳ್ಳುತ್ತಾ ಮರ್ಯಾದೆ ಹಾಳು ಮಾಡುತ್ತಿದ್ದಾನೆ. ಹಾಗಾಗಿ ಆತನನ್ನು ಕೊಲೆ ಮಾಡುವಂತೆ ತನ್ನ ಪರಿಚಯದ ಲೇಡಿ ಅಂಬಿಕಾಗೆ ಹೇಳಿದ್ದ. ಯಾರು ಯಾಕೆ ಬೇಕು ? ಈ ಕೆಲಸ ನಾನೇ ಮಾಡಿಸುವೆ ಐದು ಲಕ್ಷ ಕೊಡು ಅಂತ ಬೇಡಿಕೆ ಇಟ್ಟಿದ್ದಳು ಅಂಬಿಕಾ. ಕೊನೆಗೆ ಚೌಕಾಸಿ ಮಾಡಿ ಮೂರು ಲಕ್ಷಕ್ಕೆ ಡೀಲ್ ಫಿಕ್ಸ್ ಆಗಿತ್ತು. ಒಪ್ಪಂದದಂತೆ ಅಂಬಿಕಾ ದಯಾನಂದ ನನ್ನ ಕೊಲೆ ಮಾಡಿ 3 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಅದರಲ್ಲಿ ಒಂದಿಷ್ಟು ಮೊತ್ತ ತನ್ನ ನಾಲ್ವರು ಸ್ನೇಹಿತರಿಗೆ ನೀಡಿದ್ದಳು ಎನ್ನಲಾಗಿದೆ.

ದಯಾನಂದನನ್ನ ಮಾರಕಸ್ತ್ರಗಳಿಂದ ಕೊಲೆಗೈದ ನಾಲ್ವರು ಯುವಕರು, ಸುಪಾರಿ ಪಡೆದ ಅಂಬಿಕಾ, ಸುಪಾರಿ ಕೊಟ್ಟ ಅನೀಲ್ ಸೇರಿದಂತೆ ಏಳು ಜನರನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಈ ಪೈಕಿ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಸುನಿಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಕರಣದಲ್ಲಿ ಆತನ ಪಾತ್ರದ ಬಗ್ಗೆ ಪೊಲೀಸರು ಸೇನೆಗೆ ಮಾಹಿತಿಯನ್ನು ರವಾನಿಸಿದ್ದಾರೆ. ಸದ್ಯದಲ್ಲಿಯೇ ಆತನನ್ನು ಬಂಧಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮರಳಿ ದುಬೈಗೆ ತೆರಳಲು ಸಜ್ಜಾಗುತ್ತಿದ್ದವನನ್ನು ಪ್ರೀತಿಯ ಹೆಸರಿನಲ್ಲಿ ಬಲೆಗೆ ಹಾಕಿಕೊಂಡು ಮಹಿಳೆಯೇ ಸುಫಾರಿ ಪಡೆದು ಕೊಲೆ ಮಾಡಿಸಿರುವುದು ಕಲಬುರಗಿ ಜಿಲ್ಲೆಯೇ ಬೆಚ್ಚಿ ಬೀಳುವಂತಾಗಿದೆ.

Leave A Reply

Your email address will not be published.