Special News | ಉಡುಪಿಯಲ್ಲಿ ‘ ಟ್ರಿಪ್ಲೆಟ್ಸ್ ‘ ಗೆ ಜನ್ಮ ನೀಡಿದ ಮಹಾತಾಯಿ
ಮಕ್ಕಳಿರಲವ್ವಾ ಮನೆತುಂಬಾ ಅನ್ನುವ ಗಾದೆ ಮಾತನ್ನು ಸತ್ಯ ಮಾಡಲೋ ಏನೋ ಎಂಬಂತೆ ಮನೆ ತುಂಬಾ ಮಕ್ಕಳನ್ನು ಕೊಟ್ಟಿದ್ದಾನೆ ದೇವರು. ಉಡುಪಿಯಲ್ಲಿ ಇಂದು ದಂಪತಿಗಳಿಬ್ಬರಿಗೆ ಇವತ್ತು ಟ್ರಿಪಲ್ ಧಮಾಕ. ಆ ಮಹಾತಾಯಿಯ ಗರ್ಭದಲ್ಲಿ ಮೂರು ಮಕ್ಕಳು ಅರಳಿ, ಇಂದು ಕಣ್ಣರಳಿಸಿ ಹೊಸ ಪ್ರಪಂಚ ನೋಡಿ ನಗುತ್ತಿವೆ. ಇವತ್ತು ಅಲ್ಲಿನ ಆಸ್ಪತ್ರೆಯ ತುಂಬಾ ಕಲರವ. ಅದು ಈ ಮೂರು ಮಕ್ಕಳದ್ದು ಮತ್ತು ಅವುಗಳ ಮಕ್ಕಳ ಹೆರಿಗೆ ಮಾಡಿಸಿದ ಡಾಕ್ಟರ- ನರ್ಸ್ ರದ್ದು. ಜತೆಗೆ ಸುದ್ದಿ ಕೇಳಿ ಬಂದ ನೆಂಟರಿಷ್ಟರದ್ದು. ಅಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ತುಂಟ ಕೃಷ್ಣನ ಊರು ಉಡುಪಿ.
ಎಷ್ಟೋ ಜನ ಒಂದು ಮಗು ಆಗಲಿ ಅಂತ ಹತ್ತಾರು ದೇವರಿಗೆ ವರ ಬೇಡಿಕೊಳ್ಳತ್ತಾರೆ. ಇದರಲ್ಲಿ ಕೆಲವರಿಗೆ ದೇವರು ವರ ಕೊಡುತ್ತಾನೆ .ಇನ್ನೂ ಕೆಲವರಿಗೆ ಕೊನೆಯವರೆಗೂ ಮಕ್ಕಳ ಭಾಗ್ಯ ಕರುಣಿಸುವುದಿಲ್ಲ. ಆದರೆ ಇಲ್ಲೊಬ್ಬಳು ಮಹಾ ತಾಯಿ ಏಕಕಾಲದಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾಳೆ. ಹೌದು ಈ ಘಟನೆಗೆ ಸಾಕ್ಷಿಯಾಗಿದೆ ಉಡುಪಿಯ ಒಂದು ಆಸ್ಪತ್ರೆ.
ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ಅಂಕೋಲಾ ಮೂಲದ ಸಿದ್ದಿ ಜನಾಂಗದ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮನೀಡಿದ್ದಾರೆ. ವೈದ್ಯರು ತಾಯಿ- ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲ ಮೂಲದ 27 ವರ್ಷದ ಸುನೀತಾ ಎಂಬಾಕೆ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಮಹಿಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು, ತ್ರಿವಳಿ ಮಕ್ಕಳು ಜನಿಸಿವೆ. ಇದರಲ್ಲಿ ಎರಡು ಗಂಡು ಮಗು, ಇನ್ನೊಂದು ಹೆಣ್ಣು ಮಗು. ಡಾ.ಕವಿಶಾ ಭಟ್, ಡಾ.ರಜನಿ ಕಾರಂತ್, ಡಾ.ಸೂರ್ಯನಾರಾಯಣ, ಡಾ.ಗಣಪತಿ ಹೆಗಡೆ ಹಾಗೂ ಡಾ.ಮಹಾದೇವ ಭಟ್ ಯಶಸ್ವಿಯಾಗಿ ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ.
ಮೇ 23ರಂದು ಶಿವಮೊಗ್ಗ ನಗರದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಭದ್ರಾವತಿ ತಾಲೂಕಿನ ತಡಸ ಗ್ರಾಮದ ಅಲ್ಮಾಸ್ಬಾನು ಎಂಬುವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ ಎನಿಸಿಕೊಂಡಿದ್ದರು. ಇದಾದ ಮರುದಿನ ಅಂದರೆ ಮೇ 24ರಂದು ಚಿತ್ರದುರ್ಗ ನಗರದ ಪತಂಜಲಿ ಆಸ್ಪತ್ರೆಯಲ್ಲಿ ಚಳ್ಳಕೆರೆ ತಾಲೂಕು ದೇವರಹಳ್ಳಿಯ ಕೆ.ಸುಮಯಾ ಹುಸೇನ್ಪೀರ್ ಅವರ ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.