ಸರಳವಾಸ್ತು ಇಷ್ಟು ಭೀಕರವಾಗಿ ಕೈ ಕೊಟ್ಟದ್ದು ಯಾಕೆ ಗೊತ್ತೇ ?
ಆ ಎರಡು ‘ವಾಸ್ತು ‘ ಗಳು ಕೊಲೆಗೆ ಪ್ರಮುಖ ಕಾರಣ !!

ಬೆಳ್ಳಂಬೆಳಿಗ್ಗೆಯ ಭೀಕರ ರಕ್ತಪಾತಕ್ಕೆ ಹುಬ್ಬಳ್ಳಿ ಅಕ್ಷರಶ: ಬೆದರಿ ಬೆಚ್ಚಿದೆ. ಅತ್ಯಂತ ಬರ್ಭರವಾಗಿ ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಇರಿದು ಕೊಲೆ ಮಾಡಿ, ಇನ್ನು ಬದುಕುವುದು ಅಸಾಧ್ಯ ಅನ್ನುವಷ್ಟು ಮನಸಾರೆ ಚುಚ್ಚಿ ಹಂತಕರು ಪರಾರಿಯಾಗಿದ್ದಾರೆ. ಅವಳಿ ನಗರ ನಡೆದ ರಕ್ತಪಾತಕ್ಕೆ ತಲ್ಲಣ ಅನುಭವಿಸಿದೆ. ಇದು ನಿನ್ನೆಯ ಮಧ್ಯಾಹ್ನದ ಸಂಗತಿ.

ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿದವರು ಅವರ ಆಪ್ತರೇ ಎಂಬ ಮಾಹಿತಿ ಮೇಲ್ನೋಟಕ್ಕೆ ಕಂಡು ಬಂತು. ಗುರೂಜಿ ಕೊಲೆ ಬಳಿಕ ಆಪ್ತ ಮಹಂತೇಶ್ ಶಿರೋಳ್ ತಲೆಮರೆಸಿಕೊಂಡಿದ್ದ. ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಮಹಂತೇಶ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಅದರ ಬೆನ್ನಲ್ಲೇ ಕೊಲೆ ನಡೆದು ನಾಲ್ಕು ಗಂಟೆಗಳ ಒಳಗೆ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ್ ಮರೆವಾಡನ ಬೇಟೆ ಆಡಿದ್ದಾರೆ ಪೋಲೀಸರು. ಅಪರಾಧಿಗಳ ಪತ್ತೆ ಆಗಿದೆ, ಕಾರಣ ಮಾತ್ರ ಹೊರಬರಬೇಕಿದೆ.

ಆದರೆ ಒಂದಂತೂ ಈಗಲೇ ಜಗತ್ತಿಗೆ ಗೊತ್ತಾಗಿದೆ: ಕೊಲೆಗೆ ಮುಖ್ಯ ಕಾರಣ- ಆ ಎರಡು ವಾಸ್ತುಗಳು ! ಆ ಎರಡು ದೊಡ್ಡ ವಾಸ್ತು ದೋಷಗಳು ಚಂದ್ರಶೇಖರ ಗುರೂಜಿ ಯಾ ಕೊಲೆಗೆ ಪ್ರಮುಖ ಕಾರಣ. ಎಲ್ಲರೂ, ಆ ‘ವಾಸ್ತು’ ದೋಷಗಳನ್ನು ಗಮನಿಸಲೇಬೇಕು. ತಪ್ಪಿದ್ದರೆ ತಕ್ಷಣ ಪರಿಹಾರ ಮಾಡಿಕೊಳ್ಳಲೇ ಬೇಕು. ಏನದು…?!

1000 ಕೋಟಿಗಳ ಒಡೆಯ ಚಂದ್ರಶೇಖರ ಗುರೂಜಿ ವೃತ್ತಾಂತ ಮತ್ತು ಆ 2 ವಾಸ್ತು ದೋಷಗಳು !

ಇವತ್ತಿಗೆ 1000 ಕೋಟಿಗಳ ಒಡೆಯ ಚಂದ್ರಶೇಖರ ಗುರೂಜಿ. ಅವರು ಬಾಗಲಕೋಟೆ ಮೂಲದವರು. ಇವರ ಮೊದಲ ಹೆಸರು ಚಂದ್ರಶೇಖ ವಿರುಪಾಕ್ಷಪ್ಪ ಅಂಗಡಿ, ಬಾಗಲಕೋಟೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ಇವರು ಬಾಗಲಕೋಟೆ ಸಿವಿಲ್ ವಿಭಾಗದಲ್ಲಿ ಪದವಿ ಪಡೆದರು. ಬಳಿಕ 1998ರಲ್ಲಿ ಮುಂಬೈಗೆ ತೆರಳಿ ಕಾಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ತೆರಳಿದ ಚಂದ್ರಶೇಖರ ಅವರು ವಾಸ್ತು ಶಾಸ್ತ್ರ ಕಲಿತರು. ವಾಪಸ್ ಮುಂಬೈಗೆ ಆಗಮಿಸಿ ‘ಸರಳ ವಾಸ್ತು’ ಹೆಸರಿನಲ್ಲಿ ಕಚೇರಿ ಆರಂಭಿಸಿದ್ದರು. ಅವರು ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ವಿಭಾಗದಲ್ಲಿ ಪದವಿ ಪಡೆದರು. ಬಳಿಕ 1998ರಲ್ಲಿ ಮುಂಬೈಗೆ ತೆರಳಿ ಕಾಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ತೆರಳಿದ ಚಂದ್ರಶೇಖರ ಅವರು ವಾಸ್ತು ಶಾಸ್ತ್ರ ಕಲಿತರು. ವಾಪಸ್ ಮುಂಬೈಗೆ ಆಗಮಿಸಿ ‘ಸರಳ ವಾಸ್ತು’ ಹೆಸರಿನಲ್ಲಿ ಕಚೇರಿ ಆರಂಭಿಸಿದ್ದರು.

ಸರಳ ಜ್ಯೋತಿಷ್ಯದ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು ಚಂದ್ರಶೇಖರ ಗುರೂಜಿ. ಗ್ರಾಹಕರ ಮನೆಗೆ ತನ್ನವರನ್ನು ಕಳಿಸಿ, ಮನೆಯ ಫೋಟೋ ವಿಡಿಯೋ ತೆಗೆದುಕೊಂಡು ಹೋಗುತ್ತಿದ್ದರು. ನಂತರ ಆನ್ ಲೈನ್ ನಲ್ಲಿ ಸಲಹೆ ಬರುತ್ತಿತ್ತು. ಬ್ಯುಸಿನೆಸ್ ಜೋರಾಗಿತ್ತು. ಹಾಗೇ, ಇಷ್ಟು ವರ್ಷಗಳಲ್ಲಿ ಸಾವಿರಾರು ಕೋಟಿ ಗಳಿಸಿದ್ದರು. ಇತ್ತೀಚಿಗೆ, ತಾನು ವಿಶ್ವ ಶಕ್ತಿಯೊಂದಿಗೆ ಅನುಸಂಧಾನ ( ಸಂಹವನ ) ಸಾಧಿಸಿ, ಭಕ್ತರ ಕಷ್ಟಗಳನ್ನೆಲ್ಲ ಪರಿಹರಿಸುತ್ತೇನೆ ಎನ್ನುತ್ತಿದ್ದರು ಚಂದ್ರಶೇಖರ್ ಗುರೂಜಿ. ಒಂದು ‘ ಹೊಸ ‘ ಅನ್ನಿಸುವ ಸೆಲ್ಫ್ ಅಬಂಡನ್ಸ್ ಎನ್ನುವ ಕಾನ್ಸೆಪ್ಟ್ ಅನ್ನು ತಂದಿದ್ದರು. (ಅದೇನೂ ಹೊಸತಲ್ಲ – ಅದೊಂದು ಪಾಶ್ಚಾತ್ಯ ರಾಷ್ಟ್ರಗಳ ಮ್ಯಾನೇಜ್ಮೆಂಟ್ ಟೆಕ್ನಿಕ್ ! ). ಹಣಕಾಸು ತೊಂದರೆಯಲ್ಲಿರುವವರಿಗೆ ತಾನು ನಿಮ್ಮನ್ನು ‘ ವಿಶ್ವ ಶಕ್ತಿ ‘ ಯ ಜತೆ ಸೇರಿಸಿ ಕನೆಕ್ಟ್ ಮಾಡಿ ಕೊಡ್ತೇನೆ ಅಂತಿದ್ದರು. ಅಲ್ಲಿಂದ ನೂರೋ ಇನ್ನೂರೋ ದಿನಗಳಲ್ಲಿ ನಿಮ್ಮ ಸಮಸ್ಯೆ ಮಾಯ ಆಗತ್ತೆ. ನಿಮ್ಮ ಹಣಕಾಸು ಸಮಸ್ಯೆ ಖತಂ. ತಾನು ಹುಟ್ಟಿದ್ದೇ, ಈಗ ಬದುಕುತ್ತಿರುವುದೇ, ಲೋಕ ಕಲ್ಯಾಣಕ್ಕಾಗಿ ಅನ್ನುತ್ತಿದ್ದರು. ಅದಕ್ಕಾಗೇ ಚಾನೆಲ್ ಒಂದನ್ನು ಶುರುಮಾಡಿದ್ದರು. ಬ್ಯುಸಿನೆಸ್ ಚೆನ್ನಾಗೇ ಸಾಗುತ್ತಿತ್ತು. ಅಲ್ಲಿ ಧಾರುಣವಾಗಿ ತಪ್ಪಿತ್ತು ಮೊದಲ ‘ ವಾಸ್ತು ‘ !

ಅದು ವಂಚನೆ !! ಅದು ವಾಸ್ತು ಶಾಸ್ತ್ರದ ಹೆಸರಿನಲ್ಲಿ, ‘ವಿಶ್ವ ಶಕ್ತಿ ‘ ಯ ಸಿಗ್ನಲ್ ಕನೆಕ್ಟ್ ಮಾಡುವ ವಂಚನಾ ತಂತ್ರ !!
ವಂಚನೆ ಎಂಬ ವಾಸ್ತು ಅತ್ಯಂತ ಭೀಕರವಾಗಿ ಕೈ ಕೊಡುತ್ತದೆ. ಸಾಮಾನ್ಯವಾಜಗಿ ವಂಚನೆ ಮಾಡುವವರಿಗೆ ಏನೂ ಆಗೋದಿಲ್ಲ. ಅವರು ಗಳಿಸುತ್ತಲೇ ಹೋಗುತ್ತಾರೆ. ಆದರೆ, ವಾಸ್ತು ಚಕ್ರ ಒಂದು ಸುತ್ತು ತಿರುಗಿದಾಗ, ಅಕ್ಕಿ ಮೂಟೆಯನ್ನು ಬೆನ್ನಿನಲ್ಲಿ ಹೊತ್ತು ಸಾಗುತ್ತಿರುವಾಗ ಮೂಟೆಯ ತಳ ಪೂರ್ತಿ ಹರಿದರೆ ಏನಾಗುತ್ತೋ, ಅದೇ ಆಗತ್ತೆ. ಕ್ಷಣಗಳಲ್ಲಿ ಸಂಪತ್ತು ಮಣ್ಣುಪಾಲಾಗತ್ತೆ. ಸಂಪತ್ತಿನ ಜತೆ ಪ್ರಾಣಕ್ಕೆ ಕೂಡ ಜತೆಗೇ ಕಂಟಕ ! ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರ ಕೇಸಲ್ಲಿ ಅದೇ ಆಗಿದೆ. ಪರಿಪೂರ್ಣ ವಾಸ್ತು ಶಾಸ್ತ್ರದ ಪ್ರಕಾರ ಸಲಹೆಗಳನ್ನು ನೀಡಿ, ತಾನು ಓದಿದ್ದ ಸಿವಿಲ್ ಇoಜಿನಿಯರಿಂಗ್ ವಿಷಯದಲ್ಲಿ ಮತ್ತಷ್ಟು ಮುಂದುವರಿದು ಸಲಹೆ ಸೂಚನೆಗಳನ್ನು ಕೊಟ್ಟು, ಆತ್ಮಸಾಕ್ಷಿಗೆ ಅನುಗುಣವಾಗಿ ಹಣ ಗಳಿಸುವ ತಂತ್ರಕ್ಕೆ ಅವರು ಮುಂದಾಗಬಹುದಿತ್ತು. ಆದರೆ ಅದು ಕಷ್ಟದ ಮತ್ತು ನಿಧಾನದ ಪ್ರೋಸೆಸ್. ಅದೇ ಕಾರಣಕ್ಕೆ ಅವರು, ಕಷ್ಟದಲ್ಲಿರುವವರು- ಹಣಕಾಸಿನ ಮುಗ್ಗಟ್ಟಿನಲ್ಲಿರುವವರು- ಆರ್ಥಿಕವಾಗಿ ಮೇಲೆ ಬರಬೇಕು ಎನ್ನುವವರು – ಹೀಗೆ ಹಣಕಾಸಿನ ವಿಷಯದಲ್ಲಿ ಏನೋ ಆಗಬೇಕು ಅನ್ನುವವರನ್ನು ಬಂಡವಾಳ ಮಾಡಿಕೊಂಡು ನೇರ ವಂಚನೆಗೆ ಇಳಿದರು. ದೊಡ್ಡಮಟ್ಟದ ಹೆಸರು ಮತ್ತು ಅಗಾಧ ಸಂಪತ್ತನ್ನು ಕ್ರೋಢೀಕರಿಸಿಕೊಂಡರು. ಅದೇ ಮೊದಲ ವಾಸ್ತು ದೋಷ !

ಇನ್ನೊಂದು ವಾಸ್ತು ಇದೆ. ಈ ಎರಡೂ ವಾಸ್ತುಗಳು ಕೂಡ ಸಕತ್ ದೋಸ್ತ್ ಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪರಸ್ಪರ ಕೈ ಕೈಹಿಡಿದುಕೊಂಡು, ಹೆಗಲ ತಬ್ಬಿಕೊಂಡು ಇವರಿಬ್ಬರರೂ ಜೊತೆಗೇ ಓಡಾಡುತ್ತಾರೆ. ಅವರಿಬ್ಬರನ್ನು ಆದರ್ಶ ದಂಪತಿಗಳು ಎಂದರೂ ತಪ್ಪಿಲ್ಲ. ಅಷ್ಟರ ಮಟ್ಟಿಗೆ ಅವರು ಅನೋನ್ಯ. ಒಬ್ಬರನ್ನೊಬ್ಬರು ಅರಿತುಕೊಂಡು ಬೆರೆತುಕೊಂಡು ಬದುಕು ಸಾಗಿಸುತ್ತಾರೆ. ಆಕೆಯ ಹೆಸರು ದುರಾಸೆ !!

ಬೇಕಾದರೆ ನೀವೇ ಗಮನಿಸಿ, ಎಲ್ಲಿ ದುರಾಸೆ ಇರುತ್ತದೆಯೋ, ಅದನ್ನು ಪೂರೈಸಲು ವಂಚನೆ ಶುರುವಾಗುತ್ತದೆ. ವಂಚಕನ ಬಾಳ ಹಾದಿಯಲ್ಲಿ ದುರಾಸೆಯೇ ಆತನ ದೊಡ್ಡ ಮೋಟಿವ್.
ಚಂದ್ರಶೇಖರ ಗುರೂಜಿಯ ವಿಷಯದಲ್ಲೂ ಅದೇ ನಡೆದುಹೋಯಿತು. ಅಷ್ಟುದುಡ್ಡು ಗಳಿಸಿ ಶತಕೋಟ್ಯಾಧಿಪತಿ ಆದರೂ ದುರಾಸೆ ನಿಲ್ಲಲಿಲ್ಲ. ಮೋಸ ಮಾಡಿ ದುಡಿದ ದುಡ್ಡು ಸಾಕಾಗಲಿಲ್ಲ ಎಂದು ಟ್ಯಾಕ್ಸ್ ಉಳಿಸಲು ಇನ್ನೊಬ್ಬರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಲು ಹೊರಟರು. ತನ್ನ ಆಪ್ತ ಸಹಾಯಕನ ಪತ್ನಿಯ ಹೆಸರಿನಲ್ಲಿ ಆಸ್ತಿ ಮತ್ತು ಕಾಂಪ್ಲೆಕ್ಸ್ ನಿರ್ಮಿಸಿದರು. ಯಾಕೆಂದರೆ ಅವರಿಗೆ ಇನ್ನಷ್ಟು ದುಡಿಯಬೇಕಿತ್ತು. ಹಾಗೆ ಜೀವನ ಚಕ್ರ ಒಂದು ಸುತ್ತು ಸುತ್ತಿದೆ. ಅವರು ತಮ್ಮ ಆಪ್ತನ ಹೆಂಡತಿಯ ಹೆಸರಿನಲ್ಲಿ ಮಾಡಿದ ಬೇನಾಮಿ ಆಸ್ತಿ ಆಪ್ತ ಸಹಾಯಕನ ಕುಟುಂಬದಲ್ಲಿ ದುರಾಸೆ ಮೂಡಿಸಿದೆ. ಆ ದುರಾಸೆ ತನ್ನ ಯಜಮಾನನಿಗೇ ವಂಚಿಸಲು ಹೊರಟಿದೆ. ದುರಾಸೆ ಮತ್ತು ವಂಚನೆ ಪ್ಲಾನ್ ಮಾಡಿಕೊಂಡಿದ್ದಾರೆ. ವಿಶ್ವಶಕ್ತಿಯ ಜತೆ ಮಾತಾಡಬಲ್ಲ ತಾಕತ್ತುಳ್ಳ ಗುರೂಜಿಗೆ ಈ ಸಣ್ಣ ವಾಸ್ತು ದೋಷ ಅರ್ಥ ಆಗಿಲ್ಲ. ಈಗ ಆ ಎರಡು ವಸ್ತು ದೋಷಗಳು ಸರ್ವನಾಶಕ್ಕೆ ಕಾರಣವಾಗಿವೆ. ಚಂದ್ರಶೇಖರ ಗುರೂಜಿ ಹತ್ಯೆ ನಮಗೆ ‘ವಾಸ್ತು ದೋಷ’ ದ ಒಂದು ಕೆಟ್ಟ ಉದಾಹರಣೆಯ ಒಂದು ಒಳ್ಳೆಯ ಪಾಠ.

Leave A Reply

Your email address will not be published.