ಇನ್ನು ಮುಂದೆ KEA ಮೂಲಕ ವಿವಿ ಬೋಧಕ ಹುದ್ದೆಗಳ ನೇಮಕ | ಮೆರಿಟ್ ಪಟ್ಟಿಯಲ್ಲೇ ಆಯ್ಕೆ, ಶಿಕ್ಷಣ ಸಚಿವರಿಂದ ಮಹತ್ವದ ಸೂಚನೆ!

ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಗಳಿಗೆ ಬೋಧಕ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಲಿಖಿತ ಪರೀಕ್ಷೆ ನಡೆಸಿ, ಅರ್ಹರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಮೆರಿಟ್ ಪಟ್ಟಿಯ ಪ್ರಕಾರ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ವಿಶ್ವವಿದ್ಯಾಲಯಗಳು ಸಂದರ್ಶನಕ್ಕೆ ಆಹ್ವಾನಿಸಿ, ನೇಮಕಾತಿಯನ್ನು ಮಾಡಿಕೊಳ್ಳಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಇದೊಂದು ಹೊಸ ವ್ಯವಸ್ಥೆ ಆಗಿದ್ದು, ನೇಮಕಾತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಸುಧಾರಣೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಎರಡನೇ ವರ್ಷಕ್ಕೆ ಬೇಕಾದ ಪಠ್ಯಕ್ರಮದ ಬಗ್ಗೆ ಇತ್ತೀಚೆಗೆ ಕುಲಪತಿಗಳ ಸಭೆ ನಡೆಸಲಾಗಿದೆ. ಹಾಗೆಯೇ ಮೊದಲನೇ ವರ್ಷದಲ್ಲಿ ಎನ್ ಇ ಪಿ 2020 ಅನುಷ್ಠಾನವನ್ನು ಪರಿಣಾಮಕಾರಿಯಾಗಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 100 ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಂಗ್ರಹವಾಗುವ ಶುಲ್ಕವನ್ನು  ಆಯಾ ಕಾಲೇಜುಗಳಲ್ಲೇ ಬಳಸಲು ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವರ್ಷಕ್ಕೆ ಕನಿಷ್ಠ 50 ಕೋಟಿ ರೂಪಾಯಿ ಹಣ ಕಾಲೇಜುಗಳಲ್ಲೇ ಉಳಿಯಲಿದ್ದು ಅದರಿಂದ ಕಾಲೇಜುಗಳಲ್ಲಿನ ಸಣ್ಣಪುಟ್ಟ ಖರ್ಚುಗಳಿಗೆ ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದರು.

ಈಗ ವಿ.ವಿ.ಗಳ ಮೂಲಕ ಸರ್ಕಾರಕ್ಕೆ ಭೌತಿಕ ಕಡತ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಎಲ್ಲಾ ಕಡತಗಳು ಇ-ಆಫೀಸ್ ಮೂಲಕವೇ ಬರುತ್ತಿದ್ದು, 32,000 ಇ- ಕಡತಗಳು ಸೃಜನೆಗೊಂಡಿವೆ. ಜೊತೆಗೆ, 11 ಲಕ್ಷ ವಿದ್ಯಾರ್ಥಿಗಳಿಗೆ 1600 ಕೋಟಿ ರೂಪಾಯಿಗಳನ್ನು ಪೋರ್ಟಲ್ ಮೂಲಕ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಎಲ್ಲಾ ವಿ.ವಿ.ಗಳಲ್ಲೂ ಎಚ್.ಆರ್.ಎಂ.ಎಸ್. ಫ್ಲ್ಯಾಟ್ ಫಾರ್ಮ್ ಮೂಲಕವೇ ವೇತನ ಪಾವತಿ ಆಗುತ್ತಿದೆ ಎಂದು ಹೇಳಿದರು.

ಪದವಿ ಕಾಲೇಜುಗಳಿಗೆ ಜುಲೈ 11 ರಿಂದ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಇದೇ ಮೊದಲ ಬಾರಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಎಲ್ಲವೂ ಆನ್ ಲೈನ್ ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಸಿಂಗಲ್ ಲಾಗಿನ್ ಮೂಲಕ ಯಾವುದೇ ಕಾಲೇಜಿಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕಲು ಬೇರೆ ಬೇರೆ ಸಂಸ್ಥೆಗಳಿಗೆ ಓಡಾಡುವ ಅಗತ್ಯ ಇಲ್ಲ. ಪಿಯುಸಿ ನಂಬರ್ ಹಾಕಿದರೆ ಆಂಕಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಿಗಲಿದೆ. ಉಳಿದಂತೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಇತ್ಯಾದಿಗಳು ಕೂಡ ಆಧಾರ್ ದೃಢೀಕರಣದಿಂದ ಸಿಗಲಿವೆ ಎಂದು ಸಚಿವರು ವಿವರಿಸಿದರು.

Leave A Reply

Your email address will not be published.