ಹೆತ್ತ ಕರುಳನ್ನು ಕಸದ ರಾಶಿಯಲ್ಲಿ ಬಿಟ್ಟು ಹೋದ ತಾಯಿ, ನಂತರ ಮರಳಿ ಬಂದಳು ಮಹಾತಾಯಿ…ಯಾಕಾಗಿ ಗೊತ್ತೇ?

ಅಕ್ರಮ ಸಂಬಂಧದಿಂದ ಹುಟ್ಟಿದ ಮಗು, ಅದರಲ್ಲೂ ಹೆಣ್ಣು ಮಗು ಎಂಬ ನಿರ್ಲಕ್ಷ್ಯ ತುಂಬಾ ಮಂದಿಗೆ ಇರುತ್ತೆ. ಹಾಗೆನೇ ಮಗುವನ್ನು ಸಾಕಲಾಗದ ಪರಿಸ್ಥಿತಿ, ಅಂಗವಿಕಲ ಮಗು ಹೀಗೆ ನಾನಾ ಕಾರಣಗಳಿಂದಾಗಿ ಹೆತ್ತ ತಾಯಿಯೇ ತನ್ನ ಕರುಳ ಬಳ್ಳಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುವ ಪ್ರಕರಣಗಳು ನಡೆಯುತ್ತಾ ಇವೆ. ಇದು ಇನ್ನೂ ಮುಂದುವರಿದಿದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮಗುವನ್ನು ಬಸ್ ನಿಲ್ದಾಣದಲ್ಲಿ ಇಟ್ಟು ಹೋಗಿದ್ದ ತಾಯಿ ಮರಳಿ ಸ್ಥಳಕ್ಕೆ ಬಂದಿದ್ದಾಳೆ. ಹಾಗೆಂದು ಇವಳಿಗೆ ತನ್ನ ಹೆತ್ತ ಕರುಳನ್ನು ಸಾಕುವ ಆಸಕ್ತಿ ಇದೆ ಎಂದು ಅಲ್ಲ.

ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದ ಸೋಮವಾರ ಮುಂಜಾನೆ ಹುಟ್ಟಿದ ಎರಡು ದಿನದ ಗಂಡು ಪತ್ತೆಯಾಗಿತ್ತು. ಮಗುವನ್ನು ಬಟ್ಟೆಯಿಂದ ಸುತ್ತಿ ಬಸ್ ನಿಲ್ದಾಣ ಸಮೀಪ ಕಸದ ರಾಶಿಯಲ್ಲಿ ಇಡಲಾಗಿತ್ತು.

ನಂತರ ಸ್ಥಳೀಯರು ಇದನ್ನು ನೋಡಿದ್ದಾರೆ. ನವಜಾತ ಶಿಶು ಕಂಡು ಗಾಬರಿಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಗ್ರಾಮದ ಮಹಿಳೆ ತಾನು ಮಗುವಿನ ತಾಯಿ ಎಂದು ಹೇಳಿ ಸ್ಥಳಕ್ಕೆ ಬಂದಿದ್ದಾಳೆ.

ಪೊಲೀಸರು ಆಕೆಯನ್ನು ವಿಚಾರಿಸಿದಾಗ ತನಗೆ ಮದುವೆ ಆಗಿದೆ. ಗಂಡ ಬಿಟ್ಟು ಹೋಗಿದ್ದಾನೆ. ನನಗೆ ಮಗು ಸಾಕೋ ಆಸಕ್ತಿ ಇಲ್ಲ ಎಂದು ಹೇಳಿದ್ದಾಳೆ. ಈಕೆಯ ಕಥೆ ಕೇಳಿದ ಪೊಲೀಸರು ಮಗುವಿಗೆ ತೊಂದರೆ ಕೊಡಬೇಡ. ಕಾನೂನು ಪ್ರಕಾರ ಬೇರೆಯವರಿಗೆ ದತ್ತು ಕೊಡಿಸಲಾಗುವುದು ಎಂದು ಬುದ್ಧಿವಾದ ಹೇಳಿ ಮಗುವನ್ನು ಮರಳಿ ಆಕೆಯ ಮಡಿಲಿಗೆ ಇಟ್ಟು ಬಂದಿದ್ದಾರೆ.

ಹೆತ್ತ ತಾಯಿಯೇ ಈ ರೀತಿ ಹೇಳಿದರೆ ಏನೂ ಅರಿಯದ ಮುದ್ದು ಕಂದ ಏನು ಮಾಡುವುದು ಹೇಳಿ… ಏನೇ ಆಗಲಿ ಮಕ್ಕಳಿಲ್ಲದವರ ಜೋಳಿಗೆಗೆ ಈ ಮಗು ಆದಷ್ಟು ಬೇಗ ಸೇರಲಿ, ಉತ್ತಮ ಭವಿಷ್ಯ ಪಡೆಯಲಿ.

Leave A Reply

Your email address will not be published.