ಮಂಗಳೂರು: ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಬಾಂಗ್ಲಾ ವಲಸಿಗರ ಪತ್ತೆ ಹಚ್ಚಬೇಕೆಂದು ಈ ಹಿಂದೆ ಮಂಗಳೂರಿಗೆ ಭೇಟಿ ಕೊಟ್ಟಿದ್ದ ಗೃಹ ಸಚಿವರ ಆದೇಶದ ಹಿನ್ನೆಲೆಯಲ್ಲಿ ಜುಲೈ 04ರಂದು ಮಂಗಳೂರು ನಗರ ಪೊಲೀಸರು ಸುಮಾರು 4000 ಮಂದಿ ವಲಸಿಗ ಕಾರ್ಮಿಕರನ್ನು ವಿಚಾರಣೆ ನಡೆಸಿ ಸೂಕ್ತ ದಾಖಲೆಗಳಿಲ್ಲದ 518 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುಂಜಾನೆಯಿಂದಲೇ ಫೀಲ್ಡ್ ಗೆ ಇಳಿದ ಪೊಲೀಸರು ಸುಮಾರು 18 ತಂಡಗಳನ್ನು ರಚಿಸಿ ಆಯಾ ಠಾಣಾ ವ್ಯಾಪ್ತಿಯಲ್ಲಿರುವ ಗುತ್ತಿಗೆದಾರರು, ಕೈಗಾರಿಕ ಕೇಂದ್ರಗಳಿಗೆ ಭೇಟಿ ಕೊಟ್ಟು, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಎಂದು ಹೇಳುತ್ತಾ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ.ಎಲ್ಲರ ಬ್ಯಾಂಕ್ ಡೀಟೇಲ್ಸ್, ಫೋನ್ ಕರೆಗಳ ಬಗ್ಗೆಯೂ ಮಾಹಿತಿ ಸಂಗ್ರಹ ನಡೆಸಲಾಗುತ್ತಿದ್ದೂ, ಕಳೆದ ಒಂದು ವರ್ಷದಿಂದ ವಿದೇಶಕ್ಕೆ ಕರೆ ಮಾಡಿದ್ದರೆ ಅಂತಹವರ ವಿವರಗಳನ್ನೂ ಪಡೆಯಲಾಗುತ್ತಿದೆ.
ವಶಕ್ಕೆ ಪಡೆದುಕೊಂಡ ವಲಸಿಗರ ಸೂಕ್ತ ದಾಖಲೆ ಲಭ್ಯವಾದಲ್ಲಿ ಅಸಲಿಯೋ-ನಕಲಿಯೋ ಎನ್ನುವ ಬಗ್ಗೆಯೂ ತನಿಖೆ ನಡೆಯಲಿದ್ದು ಎಲ್ಲವೂ ಸರಿ ಇದ್ದರೆ ಮಾತ್ರ ಬಿಟ್ಟು ಕಳಿಸಿಕೊಡಲಾಗುವುದು ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಈ ವರೆಗೂ ನಗರದಲ್ಲಿ ಆಗದ ಕೆಲ ಸ್ಪಷ್ಟ ಕಾರ್ಯಾಚರಣೆ, ತನಿಖೆ ಬಹಳ ಚುರುಕಾಗಿ ನಡೆಯುತ್ತಿದ್ದು, ಅಕ್ರಮವಾಗಿ ನೆಲೆಸಿಕೊಂಡ ವಲಸಿಗರಿಗೆ ಪೊಲೀಸರ ತನಿಖೆ ಎದುರಿಸುವ ಭಯ ಶುರುವಾಗಿದೆ.