ಸುಳ್ಯ : ಕಾಂಗ್ರೆಸ್ ಮುಖಂಡೆ,ಜಿ.ಪಂ.ಮಾಜಿ ಸದಸ್ಯೆ ಸರಸ್ವತಿ ಕಾಮತ್ ಕಾಂಗ್ರೆಸ್‌ಗೆ ರಾಜಿನಾಮೆ

ಸುಳ್ಯ : ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಹಾಗು ಹಿರಿಯ ಕಾಂಗ್ರೆಸ್ ನಾಯಕಿ ಸರಸ್ವತಿ ಕಾಮತ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.

ಪಕ್ಷದಲ್ಲಿ ಯಾವುದೇ ಸ್ಥಾನ ಮಾನ, ಜವಾಬ್ದಾರಿ ನೀಡದೆ ಕಡೆಗಣಿಸಲಾಗಿದೆ ಎಂದು ಆರೊಪಿಸಿ ಅವರು ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜಿನಾಮೆ ಪತ್ರವನ್ನು ಕಳುಹಿಸಲಾಗಿದೆ ಎಂದು ಸರಸ್ವತಿ ಕಾಮತ್ ‘ಸುದ್ದಿ’ಗೆ ತಿಳಿಸಿದ್ದಾರೆ.

ಕೆಪಿಸಿಸಿ ವತಿಯಿಂದ ‘ನಾ ನಾಯಕಿ’ ಎಂಬ ಮೈಸೂರು ವಿಭಾಗೀಯ ಮಟ್ಟದ ಮಹಿಳಾ ಕಾರ್ಯಾಗಾರ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿದ್ದಂತೆ ಪ್ರಮುಖ ನಾಯಕಿಯೋರ್ವ ರಾಜಿನಾಮೆ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಕಳೆದ 25 ವರ್ಷಗಳಿಂದ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು ಈ ಹಿಂದೆ ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕೆಲಸ ಮಾಡಿದ ಆತ್ಮ ತೃಪ್ತಿ ಇದೆ. ಬಾಳಿಲ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಅದು ಜನರು ನೀಡಿರುವ ಜವಾಬ್ದಾರಿ. ಆದರೆ ಕಳೆದ ಎರಡು ದಶಕಗಳ ಅವಧಿಯಲ್ಲಿ ಪಕ್ಷದ ಯಾವುದೇ ಸ್ಥಾನಮಾನ, ಜವಾಬ್ದಾರಿ ನೀಡದೆ ಕಡೆಗಣಿಸಿದ್ದಾರೆ. ಜಿಲ್ಲೆ ಅಥವಾ ರಾಜ್ಯ ಮಟ್ಟದಲ್ಲಿ ಮಹಿಳಾ ಕಾಂಗ್ರೆಸ್‌ನಲ್ಲಿ ಕೂಡ ಯಾವುದೇ ಪ್ರಾತಿನಿಧ್ಯ ನೀಡಿಲ್ಲ. ಯಾಕೆ ರೀತಿ ಕಡೆಗಣನೆ ಮಾಡಿದ್ದಾರೆ ಎಂದು ಜಿಲ್ಲೆಯ ಮತ್ತು ರಾಜ್ಯದ ಕಾಂಗ್ರೆಸ್‌ನ ನಾಯಕರು ಉತ್ತರಿಸಬೇಕು.

ಸರಸ್ವತಿ ಕಾಮತ್ ಕಾಂಗ್ರೆಸ್‌ನಲ್ಲಿ ಏನು, ಪಕ್ಷ ನನಗೆ ಏನು ನ್ಯಾಯ ನೀಡಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಯಾವುದೇ ಜವಾಬ್ದಾರಿ ಇಲ್ಲದೆ ಪಕ್ಷದಲ್ಲಿ ಮುಂದುವರಿಯುವುದರಲ್ಲಿ, ಪಕ್ಷದ ವೇದಿಕೆ ಏರುವುದರಲ್ಲಿ, ಕಾರ್ಯಕ್ರಮದಲ್ಲಿ ಭಾಗವಹಿಸುವುದರಲ್ಲಿ ಅರ್ಥವಿಲ್ಲ. ಆದುದರಿಂದ

ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ. ಮುಂದಿನ ರಾಜಕೀಯ ನಡೆಯ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸರಸ್ವತಿ ಕಾಮತ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯೆ ಆಗಿದ್ದ ಸಮಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಆದ ಘಟನೆಯ ಬಗ್ಗೆ ಬಿಜೆಪಿಯವರ ವಿರುದ್ಧ ಏಕಾಂಗಿಯಾಗಿ ಕಾನೂನು ಹೋರಾಟ ನಡೆಸಿದ್ದೇನೆ. ಅದು ಈಗಲೂ ಮುಂದುವರಿಯುತ್ತಿದೆ.

ಆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಯಾವುದೇ ಬೆಂಬಲ,ಸಹಕಾರ ದೊರಕಿಲ್ಲ. ಒಟ್ಟಿನಲ್ಲಿ ಪಕ್ಷದಲ್ಲಿ ಆಗಿರುವ ಕಡೆಗಣನೆಯಿಂದ ಮನನೊಂದು ರಾಜಿನಾಮೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.