ವಿಟ್ಲ : ಬಸ್ ತಂಗುದಾಣದಲ್ಲಿ ಹೆಪ್ಪುಗಟ್ಟಿದ ರಕ್ತ | ಪ್ರಕರಣ ಬೇಧಿಸಿದ ಪೊಲೀಸರಿಂದ ಸತ್ಯಾಂಶ ಬಯಲು ,ಓರ್ವ ವಶಕ್ಕೆ

ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ವಿಟ್ಲ ಪುತ್ತೂರು ರಸ್ತೆಯ ಬದನಾಜೆ ಸಾರ್ವಜನಿಕರ ಬಸ್ಸುತಂಗುದಾಣದಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯೋರ್ವರು ಕುಡಿದ ಮತ್ತಿನಲ್ಲಿ ಬಿದ್ದು ಆಗಿರುವ ಘಟನೆ ಎಂದು ತಿಳಿದು ಬಂದಿದೆ.

ಬದನಾಜೆ ಬಸ್ಸುತಂಗುದಾಣದ ಪಕ್ಕದ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ ಬಂದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿತ್ತು. ಮಾತ್ರವಲ್ಲದೆ ಪ್ರಕರಣ ಹಲವಾರು ಊಹಾಪೋಹಕ್ಕೆ ಕಾರಣವಾಗಿತ್ತು. ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ
ಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ. ನೆಲ್ಲಿಗುಡ್ಡೆ ಮೂಲದ
ವ್ಯಕ್ತಿಯಾಗಿರುವ ಆತ ಕುಡಿತದ ಮತ್ತಿನಲ್ಲಿ ಬದನಾಜೆ ಬಸ್ಸು
ನಿಲ್ದಾಣದಲ್ಲಿ ಕುಳಿತಿದ್ದರು. ಈ ವೇಳೆ ಆ ವ್ಯಕ್ತಿ ಕೆಳಗೆ ಬಿದ್ದು
ಮುಖ ಹಾಗೂ ಮೂಗಿನ ಭಾಗಕ್ಕೆ ಗಾಯವಾಗಿದ್ದು, ಆ ಗಾಯದಿಂದ ರಕ್ತ ಹೊರಬಂದಿತ್ತೆನ್ನಲಾಗಿದೆ. ರಕ್ತವನ್ನು ಕಂಡ
ಆತ ಬೆಳಗ್ಗಿನ ವೇಳೆ ಅಲ್ಲಿಂದ ಎದ್ದು ವಿಟ್ಲ ಕಡೆಗೆ ತೆರಳಿದ್ದು,
ವಿಟ್ಲ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ
ನಡೆಸಿದಾಗ ನಿಜಾಂಶ ಬಯಲಾಗಿದೆ. ಈ ಮೂಲಕ
ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದಂತಾಗಿದೆ.

Leave A Reply

Your email address will not be published.