ಕುಕ್ಕೇ ಸುಬ್ರಹ್ಮಣ್ಯ ಠಾಣೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ!! ಕೂಡಲೇ ಹೊಸ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಸೂಚನೆ

ಸುಬ್ರಹ್ಮಣ್ಯ: ಇಲ್ಲಿನ ಪೊಲೀಸ್ ಠಾಣೆಯ ದುರಾವಸ್ಥೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಠಾಣೆಗೆ ಭೇಟಿ ನೀಡಿದರು.

ಸುಮಾರು 50 ವರ್ಷಗಳ ಹಿಂದಿನ ಕಟ್ಟಡವು ಕಳೆದ ಒಂದೆರಡು ವರ್ಷಗಳಿಂದ ಮುರಿದು ಬೀಳುವ ಸ್ಥಿತಿ ತಲುಪಿದ್ದು, ಈ ಬಾರಿ ಮಳೆಯಿಂದ ರಕ್ಷಣೆಗೆ ಟಾರ್ಪಲು ಹೊದಿಕೆ ಹೊದಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಕಳೆದ ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದ ಸಚಿವರು ಹೊಸ ಕಟ್ಟಡ ಮಂಜೂರು ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಆದರೆ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಗರಂ ಆದ ಸಚಿವರು ಇಂಜಿನಿಯರರನ್ನು ತರಾಟೆಗೆ ತೆಗೆದುಕೊಂಡಿದ್ದು, ಟೆಂಡರ್ ಕರೆಯಲಾಗಿದ್ದರೂ ಹಣ ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ಕಾಮಗಾರಿ ಪ್ರಕ್ರಿಯೆ ಮುಂದೂಡಲಾಗಿತ್ತು. ಕೂಡಲೇ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದ್ದು, ಆದಷ್ಟು ಶೀಘ್ರ ಕುಕ್ಕೆಯ ಪೊಲೀಸ್ ಠಾಣೆಗೆ ಹೊಸ ಕಟ್ಟಡದ ಹಲವು ವರ್ಷಗಳ ಭರವಸೆ ಈಡೇರಲಿದೆ.

Leave A Reply

Your email address will not be published.