ಬೆಂಗಳೂರು:ಡಾ|ಬದರೀನಾಥ ಜಹಗೀರದಾರರ ಗಹನ ಕೃತಿಗೆ ಸಾಹಿತ್ಯ ಸಿರಿ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ಸಂಸ್ಕೃತಿಕ ಪರಿಷತ್ತು, ಸೃಷ್ಟಿ ಶಕ್ತಿ ಸಂಸ್ಥೆ (ರಿ) ಬೆಂಗಳೂರು ವತಿಯಿಂದ ದಿನಾಂಕ 26.06.2022 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ. ಬದರೀನಾಥ ಜಹಗೀರದಾರರ ಗಹನ ಕಥಾ ಸಂಕಲನಕ್ಕೆ 2022ನೇ ಸಾಲಿನ ಪುಸ್ತಕ ಬಹುಮಾನ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಂಗೀತಗಾರರಾದ ಮಾನ್ಯ ಶ್ರೀ ಶಶಿಧರ ಕೋಟೆ ನೆರವೇರಿಸಿ ಮಾತನಾಡಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಸಾಹಿತಿಕ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿದೆ. ಇಂದಿನ ದಿನಮಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸುವ ಅನಿವಾರ್ಯತೆಯಿದೆ. ನಾಡಿನ ಲೇಖಕರಿಂದ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿ ಸೂಕ್ತವಾದ ಕೃತಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಹೀಗೆ ನಾಡಿನಾದ್ಯಂತ ಪರಿಷತ್ತು ತನ್ನ ಕಾರ್ಯಕ್ರಮವನ್ನು ವಿಸ್ತರಿಸಿಕೊಂಡು ಸಾಗಲಿ ಎಂದು ಹಾರೈಸಿದರು. ಗಹನ ಕೃತಿಕಾರರಿಗೆ ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ನವಾಜ್ ಷರೀಫ್ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಅಧ್ಯಕ್ಷರು ಪೀಪಲ್ ಫಾರ್ ಅನಿಮಲ್ ಸಂಸ್ಥೆ ಬೆಂಗಳೂರು ಅವರು ಮಾತನಾಡಿ ನಾಡಿನ ತುಂಬ ಕನ್ನಡ ಸಂಘಟನೆಗಳು ನೆಲ ಜಲ ಭಾಷೆ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಕಲೆ,ಸಾಹಿತ್ಯ ತನ್ನದೇ ಆದ ವೈಶಿಷ್ಠತೆಯನ್ನು ಹೊಂದಿದೆ. ಇಂದು ಅಸಂಖ್ಯಾತ ಬರಹಗಾರರು ಪ್ರತಿ ವರ್ಷ ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಿ ಬೆಳೆಸುವ, ಸತ್ಕರಿಸುವ ಮುನ್ನಡೆಸುವ ಜವಾಬ್ದಾರಿಯನ್ನು ಕನ್ನಡ ಸಂಘ ಸಂಸ್ಥೆಗಳು ಮಾಡಿದರೆ ಕನ್ನಡದ ಕಂಪು ಪಸರಿಸಲು, ಸಾಹಿತ್ಯ ಕೃಷಿ ಹೆಚ್ಚಿಸಲು ನೇರವಾಗುತ್ತದೆ. ಸಾಧಕರನ್ನು ಗುರುತಿಸಿ ಗೌರವಿಸುವ ಜೊತೆಗೆ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿ ಪ್ರಶಸ್ತಿ ನೀಡುತ್ತಿರುವುದು ಬರಹಗಾರರಿಗೆ ಹುಮ್ಮಸ್ಸು ತುಂಬಿದಂತಾಗುತ್ತಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಡಾ.ಗಣೇಶ್ ಆರ್ ದೈವಾಜ್ಞ ಉಪನ್ಯಾಸಕರು ಮತ್ತು ಆಡಳಿತಗಾರರು ದಿವ್ಯಜ್ಯೋತಿ ಜೋತಿಷ್ಯ ಮಹಾವಿದ್ಯಾಲಯ ಬೆಂಗಳೂರು ಮಾತನಾಡಿ ಕಲೆ, ಸಾಹಿತ್ಯವನ್ನು ಸಂಭ್ರಮಿಸುವ, ಆಸ್ವಾದಿಸುವ ಇಂತಹ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಬಹಳಷ್ಟು ಪ್ರಯೋಜನಕಾರಿ ಜೊತೆಗೆ ಮನೋಲ್ಲಾಸವನ್ನು ನೀಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳು ಹಾಗೂ ಚಲನಚಿತ್ರ ನಟರಾದ ಡಾ. ಚಿಕ್ಕ ಹೆಜ್ಜಾಜಿ ಮಹಾದೇವ್ ವಹಿಸಿ ಮಾತನಾಡಿ ಇಂದು ಬರಹಗಾರರು ವಾಸ್ತವಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಿ ಆ ಮೂಲಕ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ. ಮೌಲ್ಯಗಳ ಉಳಿವಿಗಾಗಿ ಸದಾ ಜಾಗೃತಗೊಳ್ಳುವ ಪ್ರಮೇಯವಿದೆ. ಸತ್ವಭರಿತ ಸಮಾಜಕ್ಕೆ ಮಾನವೀಯತೆಯ ಸಂದೇಶ ನೀಡುವ, ಸಮಾಜವನ್ನು ಒಗ್ಗೂಡಿಸುವ, ಮನಸ್ಸುಗಳನ್ನು ಬೆಸೆಯುವ ಕಾರ್ಯವನ್ನು ಸಾಹಿತ್ಯ ಮತ್ತು ಸಂಘಟನೆಗಳು ನಡೆಸಿಕೊಂಡು ಬರಬೇಕಿದೆ. ಇಂದಿನ ಈ ಕಾರ್ಯಕ್ರಮವನ್ನು ಮನಃ ಪೂರ್ವಕವಾಗಿ ಶ್ಲಾಘಿಸುತ್ತೇನೆ. ಸಾಹಿತಿಗಳು, ಸಂಘಟಕರು, ಸಾಹಿತ್ಯಾಭಿಮಾನಿಗಳನ್ನು ಒಗ್ಗೂಡಿಸಿದ ಈ ಕಾರ್ಯಕ್ರಮ ಸಮಾಜಕ್ಕೆ ಆದರ್ಶವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಸಾತ್ವಿ ಯೋಗಿನಿ ಮಾತಾ ಶ್ರೀವಿದ್ಯಾ ಮಹಾ ಸಂಸ್ಥಾನ ಬಸವನಗುಡಿ ವಹಿಸಿದ್ದರು. ಆಶೀರ್ವಚನವನ್ನು ಶ್ರೀ ಶ್ರೀ ನರಸಿಂಹಮೂರ್ತಿ ಸ್ವಾಮೀಜಿ ಅಮ್ಮನಗುಡ್ಡ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಜಯರಾಮ್ ಜಿ, ಡಾ. ಗುಣವಂತ ಮಂಜು, ಕರ್ನಾಟಕ ಸಂಸ್ಕೃತಿಕ ಪರಿಷತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು, ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡ ಸಂಘಟಕರು, ಕಲಾವಿದರು ಉಪಸ್ಥಿತರಿದ್ದರು.

Leave A Reply

Your email address will not be published.