ನನಗೆ ಮುಸ್ಲಿಮರ ಓಟು ಬೇಡ, ನಾನು ಅವರನ್ನು ಕೇಳುವುದೇ ಇಲ್ಲ !! – ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೊಮ್ಮೆ ಗುಡುಗಿದ್ದಾರೆ. ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಟೀಕಿಸಿದರೆ ಮುಸ್ಲಿಮರ ಓಟು ಬರುತ್ತದೆ ಅಂದುಕೊಂಡಿದ್ದಾರೆ. ಆದರೆ ನನಗೆ ಮುಸ್ಲಿಮರ ವೋಟು ಬೇಡ. ನಾನು ಅವರನ್ನು ಕೇಳೋದೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಆರ್‌ಎಸ್‌ಎಸ್ ಅವರಿಗೂ 40 ಪರ್ಸೆಂಟೇಜ್ ಕಮಿಷನ್ ಹೋಗುತ್ತದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ.

ಆರ್‌ಎಸ್‌ಎಸ್ ಟೀಕಿಸಿದರೆ ಸ್ವರ್ಗಕ್ಕೆ ಹೋಗ್ತೀವಿ ಅಂದುಕೊಂಡಿದ್ದಾರೆ. ಮುಸ್ಲಿಮರ ವೋಟು ಬರುತ್ತದೆ ಅಂದುಕೊಂಡಿದ್ದಾರೆ. ನೀವು ಮುಸಲ್ಮಾನರ ವೋಟು ತೆಗೆದುಕೊಳ್ಳಿ, ಬೇಡ ಅನ್ನೋದಿಲ್ಲ. ಆದರೆ ನನಗಂತೂ ಮುಸ್ಲಿಮರ ವೋಟು ಬೇಡ. ಈ ಹಿಂದೆಯೂ ನಾನು ಅವರ ವೋಟು ಕೇಳಿಲ್ಲ, ಕೇಳುವುದೂ ಇಲ್ಲ. ಆದರೂ ಮುಸ್ಲಿಂ ಸಮುದಾಯ ಇರುವ 60 ಬೂತ್‌ಗಳಲ್ಲಿ ನನಗೆ ಮೂರುವರೆ ಸಾವಿರ ವೋಟು ಬಂದಿದೆ ಎಂದು ಬೀಗಿದ್ದಾರೆ.

ಆರ್‌ಎಸ್‌ಎಸ್ ಬೈಯ್ಯದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಮೊದಲು ಸಿದ್ದರಾಮಯ್ಯ ಆರ್‌ಎಸ್‌ಎಸ್‌ಗೆ ಬೈಯ್ಯುತ್ತಿದ್ದರು. ಈಗ ಕುಮಾರಸ್ವಾಮಿ ಅವರಿಗೂ ಆ ಚಾಳಿ ಬಂದಿದೆ. ಆರ್‌ಎಸ್‌ಎಸ್ ಟೀಕಿಸಿದರೆ ಮುಸ್ಲಿಮರ ವೋಟು ಬರುತ್ತದೆ ಎನ್ನುವುದು ಅವರ ಭಾವನೆ ಎಂದು ಕುಟುಕಿದ್ದಾರೆ.

Leave A Reply

Your email address will not be published.