ಗ್ರಾಮ ಪಂಚಾಯತ್ ಗದ್ದುಗೆಗಾಗಿ ಸಿನಿಮೀಯ ರೀತಿಯಲ್ಲಿ ನಡೆದೇ ಹೋಯಿತು ಮಾಜಿ ಅಧ್ಯಕ್ಷರ ಕಿಡ್ನಾಪ್ !!

ರಾಜಕೀಯದಲ್ಲಿ ಕುರ್ಚಿ ಆಸೆಗಾಗಿ ಏನು ಬೇಕಾದರೂ ಮಾಡುತ್ತಾರೆ. ಅಂತೆಯೇ ಇಲ್ಲಿ ಗ್ರಾಮ ಪಂಚಾಯತ್ ಗದ್ದುಗೆಗಾಗಿ ಸಿನಿಮೀಯ ರೀತಿಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೊಬ್ಬರನ್ನು ಕಿಡ್ನಾಪ್ ಮಾಡಿರುವ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಮರೇಶ್ ಮೇಟಿ ಅಪಹರಣಕ್ಕೊಳಗಾದ ವ್ಯಕ್ತಿ.

ಬಾಗಲಕೋಟೆ ಜಿಲ್ಲೆಯ ಬೀಳಗಿಯಿಂದ ಜೂನ್ 21 ರಂದು ಅಪಹರಣ ಮಾಡಲಾಗಿದೆ. ಕಿಡ್ನಾಪ್ ದೃಶ್ಯಾವಳಿಗಳು ಅಮರೇಶ್ ಮೇಟಿ ತಂಗಿದ್ದ ಲಾಡ್ಜ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. 15 ತಿಂಗಳ ಕಾಲ ಅಧ್ಯಕ್ಷನಾಗಿ ಇತ್ತೀಚೆಗಷ್ಟೇ ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದ್ದ ಅಮರೇಶ್ ಮೇಟಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ ಮುಂದಿನ ಅವಧಿಗೆ ಒಪ್ಪಂದದಂತೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಕಡೆಯವರಿಂದ ಅಪಹರಣವಾಗಿದೆ ಎಂದು ಮೇಟಿ ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಯಚೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸನಗೌಡ ಕಂಬಳಿ ಹಾಗೂ ಗ್ರಾ.ಪಂ ಸದಸ್ಯ ಲಕ್ಕಪ್ಪ ಮೇಲೆ ಆರೋಪ ಹೊರಿಸಿ ಇತರ 10 ಜನರ ಮೇಲೆ ಬೀಳಗಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ಪ್ರಕರಣ ದಾಖಲಿಸಲಾಗಿದೆ. ಮರಳು ಮಾಫಿಯಾ ಜನ ಹಾಗೂ ಬೀಳಗಿ ಕಾಂಗ್ರೆಸ್‍ನವರಿಂದ ಅಪಹರಣ ಮಾಡಿಸಲಾಗಿದೆ ಎಂಬ ಆರೋಪವಿದೆ. ಇತ್ತ ಲಿಂಗಸುಗೂರಿನಲ್ಲಿ ಅಮರೇಶ್ ತಾಯಿ ಮೇಲೆಯೂ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಅಮರೇಶ್ ತಾಯಿ ಲಿಂಗಸುಗೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Leave A Reply

Your email address will not be published.