ಇಂಧನಕ್ಕಾಗಿ ಸರತಿಯಲ್ಲಿ 5 ದಿನಗಳಿಂದ ಕಾದಿದ್ದ ಟ್ರಕ್ ಚಾಲಕ ತನ್ನ ವಾಹನದಲ್ಲೇ ಸಾವು!

ಸ್ವಾತಂತ್ರ್ಯದ ನಂತರ ಅತ್ಯಂತ ಘೋರ ಆರ್ಥಿಕ ಬಿಕ್ಕಟ್ಟಿಗೆ ದ್ವೀಪ ರಾಷ್ಟ್ರ ಶ್ರೀಲಂಕಾದ ಸಿಲುಕಿದೆ. ತೈಲ, ಆಹಾರ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಮಸ್ಯೆ ಎದುರಾಗಿದೆ. ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಇಂಧನ ಕೊರತೆ ವಿಪರೀತವಾಗಿದೆ. ವಾರಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್​, ಡೀಸೆಲ್​ ಪಡೆಯಬೇಕಿದೆ. ಹೀಗೆ ಸರತಿಯಲ್ಲಿ 5 ದಿನಗಳಿಂದ ಕಾದಿದ್ದ ವ್ಯಕ್ತಿಯೊಬ್ಬ ತನ್ನ ವಾಹನದಲ್ಲೇ ಮೃತಪಟ್ಟಿದ್ದಾನೆ.

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ದೇಶದ ಪಶ್ಚಿಮ ಪ್ರಾಂತ್ಯದ ಇಂಧನ ಕೇಂದ್ರದಲ್ಲಿ ಐದು ದಿನಗಳ ಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದ 63 ವರ್ಷದ ಟ್ರಕ್ ಚಾಲಕ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವ್ಯಕ್ತಿ ತನ್ನ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದು, ಇದು ದೇಶದ ಇಂಧನ ಕೇಂದ್ರಗಳಲ್ಲಿ ಸುದೀರ್ಘ ಕಾಯುವಿಕೆಯಿಂದ ಸಂಭವಿಸಿದ 10 ನೇ ಸಾವು ಎಂದು ಹೇಳಲಾಗುತ್ತದೆ.

ದೇಶದ ಪಶ್ಚಿಮ ಪ್ರಾಂತ್ಯದ ಪೆಟ್ರೋಲ್​ ಬಂಕ್​ ಬಳಿ 63 ವರ್ಷದ ವ್ಯಕ್ತಿಯೊಬ್ಬ 5 ದಿನಗಳಿಂದ ಸರದಿಯಲ್ಲಿ ಕಾದಿದ್ದ. ಸರತಿ ಸಾಲಿನಲ್ಲಿ ಕಾದು ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಎಲ್ಲರೂ 43 ರಿಂದ 84 ವರ್ಷ ವಯಸ್ಸಿನವರು. ಹೆಚ್ಚಿನ ಸಾವುಗಳು ಹೃದಯ ಸ್ತಂಭನದಿಂದ ಸಂಭವಿಸಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ವಾರದ ಹಿಂದೆ 53 ವರ್ಷದ ವ್ಯಕ್ತಿಯೊಬ್ಬರು ಕೊಲಂಬೊದ ಪಾನದುರಾದ ಇಂಧನ ಕೇಂದ್ರದಲ್ಲಿ ಹಲವಾರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ದೇಶದಲ್ಲಿ ಇಂಧನ ಕೊರತೆ ತೀವ್ರವಾಗಿದ್ದು, ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚಿನ ರಜಾದಿನಗಳನ್ನು ಘೋಷಿಸಲಾಗಿದೆ. ಅಲ್ಲದೇ, ಈಗಾಗಲೇ ಶಾಲಾ ಕಾಲೇಜುಗಳಿಗೆ ಪೂರ್ಣ ರಜೆ ನೀಡಿ, ಆನ್​ಲೈನ್​ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಶ್ರೀಲಂಕಾದ ಒಟ್ಟು ವಿದೇಶಿ ಸಾಲವು 51 ಬಿಲಿಯನ್ ಡಾಲರ್​ ಇದೆ.

Leave A Reply

Your email address will not be published.