ಗೃಹಪ್ರವೇಶದಂದು ಮನೆಗೆ ನುಗ್ಗಿ 25,000 ಕ್ಕೆ ಬೇಡಿಕೆ ಇಟ್ಟ “ಮಂಗಳಮುಖಿ”ಯರು | ಮನೆಸಾಮಾನೆಲ್ಲ ಒಡೆದು ಹಾಕಿ ದಾಂಧಲೆ!

ಮಂಗಳಮುಖಿಯರ ಬಗ್ಗೆ ಸಮಾಜಕ್ಕೆ ಕನಿಕರ ಇದ್ದೇ ಇದೆ. ಸರ್ಕಾರ ಆಗಾಗ್ಗೆ ಕಾಳಜಿ ಇವರ ಒಳಿತಿಗಾಗಿ ಏನಾದರೊಂದು ಯೋಜನೆಗಳನ್ನು ತರುತ್ತಿದೆ.
ಉತ್ತಮ ಸಮಾಜಕ್ಕಾಗಿ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಬೇಕು ಎಂದು ಮಂಗಳಮುಖಿಯರೂ ಹಂಬಲಿಸುತ್ತಾರೆ.

ಆದರೆ ಇವೆಲ್ಲದರ ಮಧ್ಯೆ ಕೆಲ ಮಂಗಳಮುಖಿಯರು ಮಾಡುವ ಕೆಲಸಗಳಿಂದ ಆ ಸಮುದಾಯಕ್ಕೆ ಕೆಟ್ಟ ಹೆಸರು ಬರುವುದೂ ಉಂಟು. ಮಂಗಳಮುಖಿಯರ ಈ ನಡುವಳಿಕೆಗಳಿಂದ ಸಮಾಜ ಬೇಸರಿಸಿಕೊಳ್ಳುವುದೂ ಉಂಟು. ಅಲ್ಲಲ್ಲಿ ಕಿರಿಕ್, ವಂಚನೆ , ಗಲಾಟೆ ಮಾಡುವ ಮಂಗಳಮುಖಿಯರೂ ಕೂಡಾ ಇದ್ದಾರೆ. ಮಂಗಳಮುಖಿಯರಿಂದ ಅವರಿವರ ಹೆಸರಿನಲ್ಲಿ ಹಣ ದೋಚುವ ಪ್ರಯತ್ನಗಳೂ ನಡೆಯುತ್ತವೆ. ಇದರಿಂದ ಉಳಿದವರಿಗೆ ಕಳಂಕ ತಟ್ಟುತ್ತದೆ. ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ಇದಕ್ಕೆ ಪುಷ್ಠಿ ನೀಡುವಂತಹ ಘಟನೆ ನಡೆದಿದೆ.

ಗೃಹಪ್ರವೇಶ ಸಂಭ್ರಮಕ್ಕೆ ಮಂಗಳಮುಖಿಯರು ಕಾಟ ಕೊಟ್ಟಿರುವ ಘಟನೆ ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ನಡೆದಿದೆ. 25 ಸಾವಿರ ರೂಪಾಯಿ ನೀಡುವಂತೆ ಕಿರಿಕ್ ತೆಗೆದ ಮಂಗಳಮುಖಿಯರು ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಅಷ್ಟು ಕೊಡಲು ಸಾಧ್ಯವಿಲ್ಲ ಎಂದು ಮನೆ
ಮಾಲೀಕರು ಕಡ್ಡಿ ತುಂಡು ಮಾಡಿ ಹೇಳಿದ್ದಾರೆ. ಅಲ್ಲಿಗೂ, 2500 ಸಾವಿರ ರೂಪಾಯಿಯಷ್ಟೆ ಕೊಡ್ತಿವಿ ತೆಗೆದುಕೊಂಡು, ಊಟ ಮಾಡಿ ಹೋಗಿ ಎಂದು ಮನೆ ಮಾಲೀಕರು ಹೇಳಿದ್ದಾರೆ.

ಆದರೆ ಇದಕ್ಕೆ ಒಪ್ಪದ ಮಂಗಳಮುಖಿಯರು 25 ಸಾವಿರ ರೂಪಾಯಿ ಕೊಡದಿದ್ದರೆ ಇನ್ನಷ್ಟು ಜನ ಬಂದು ಗಲಾಟೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಮನೆ ಮಾಲೀಕರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ. ಸಾಲದು ಅಂತಾ ಅಶ್ಲೀಲ ಪದಗಳಿಂದ ಬೈದು ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಚೇರ್ ಗಳನ್ನ ಒಡೆದು ಹಾಕಿ ಗಲಾಟೆ ಮಾಡಿದ್ದಾರೆ. ಇಂದು ಬೆಳಗ್ಗೆ ಗೃಹಪ್ರವೇಶ ಪೂಜೆಯ ವೇಳೆ ಇಷ್ಟೆಲ್ಲಾ ರಾದ್ಧಾಂತ ಮಾಡಿದ್ದಾರೆ ಮಂಗಳಮುಖಿಯರು, ಆದರೆ ಮನೆ ಮಂದಿ ಎಲ್ಲಾ ಒಟ್ಟುಗೂಡಿದಾಗ, ಪರಿಸ್ಥಿತಿ ಅರಿತ ಮಂಗಳಮುಖಿಯರು ಎರಡು ಆಟೋಗಳಲ್ಲಿ ಸ್ಥಳದಿಂದ ಓಟಕ್ಕಿತ್ತಿದ್ದಾರೆ.

ಬಳಿಕ ಮನೆ ಮಾಲೀಕ ಲೋಕೇಶ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.

Leave A Reply

Your email address will not be published.