ಮಂಗಳೂರು:ತಂದೆಯ ಕುಕೃತ್ಯಕ್ಕೆ ಮೂವರು ಮಕ್ಕಳ ದುರಂತ ಅಂತ್ಯ!! ಆರೋಪಿ ಪೊಲೀಸರ ವಶಕ್ಕೆ

ಮಂಗಳೂರು:ಆರ್ಥಿಕವಾಗಿ ಕುಗ್ಗಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಹೊಂದಿ ತೆಗೆದುಕೊಂಡ ಆತ್ಮಹತ್ಯೆಯ ನಿರ್ಧಾರಕ್ಕೆ ಇನ್ನೂ ಜಗವನ್ನರಿಯದ ಆತನ ಮೂವರು ಪುಟ್ಟ ಕಂದಮ್ಮಗಳು ದುರಂತ ಅಂತ್ಯಕಂಡ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಕಿನ್ನಿಗೋಳಿ ಸಮೀಪದ ಪದ್ಮನೂರು ಎಂಬಲ್ಲಿ ನಡೆದಿದೆ.

ಮೃತ ಮಕ್ಕಳನ್ನು ರಶ್ಮಿತಾ(14),ಉದಯ್(11), ದಕ್ಷಿತ್(04) ಎಂದು ಗುರುತಿಸಲಾಗಿದ್ದು ಕೃತ್ಯ ಎಸಗಿದ ಆರೋಪಿ ತಂದೆಯನ್ನು ವಿಜೇಶ್ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ

ಘಟನೆ ವಿವರ:ಆರೋಪಿ ವಿಜೇಶ್ ಆರ್ಥಿಕವಾಗಿ ಹಿಂದುಳಿದಿರುವ ಕಾರಣದಿಂದ ಜೀವನವೇ ಬೇಡವೆಂದು ನಿರ್ಧರಿಸಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ. ಈ ವೇಳೆಗಾಗಲೇ ಸ್ಥಳೀಯರು ಗಮನಿಸಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿ ರಕ್ಷಣೆಗೆ ಮುಂದಾಗಿದ್ದಾರೆ.

ಕೃತ್ಯ ಎಸಗಿದ ವಿಜೇಶ್ ಹಾಗೂ ಆತನ ಪತ್ನಿ ರಶ್ಮಿಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಿಸಿದ್ದು, ಅಷ್ಟರಲ್ಲಾಗಲೇ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕುಕೃತ್ಯ ಎಸಗಿ ಮೂವರು ಮಕ್ಕಳ ಸಾವಿಗೆ ಕಾರಣನಾದ ತಂದೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.