ಕೂಲಿ ಕೆಲಸ ಮಾಡಿ ವರ್ಷಗಳಲ್ಲಿ ಕೋಟ್ಯಧೀಶನಾದ ವ್ಯಕ್ತಿ; ತನಿಖೆಯ ಬಳಿಕ ಹೊರಬಿತ್ತು ಅಸಲಿ ಕಾರಣ!?

ಚಿಕ್ಕಬಳ್ಳಾಪುರ: ಕೇವಲ ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ವ್ಯಕ್ತಿಯ ಜೀವನ ಕಂಡು, ದುಡಿದರೆ ಇವನ ರೀತಿ ನ್ಯಾಯವಾಗಿ ಬೆವರು ಸುರಿಸಿ ದುಡಿಯಬೇಕು ಎಂದು ಹೋಗಳಿಕೆ ತೆಗೆದುಕೊಳ್ಳುತ್ತಿದ್ದ ಈ ಖತರ್ನಾಕ್ ನ ನಿಜ ಜೀವನ ಈಗ ಬಯಲಾಗಿದೆ.

ಹೌದು. ಕೂಲಿ ಕಾರ್ಮಿಕನಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರವೇಶಿಸಿದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಕೆಲವೇ ವರ್ಷಗಳಲ್ಲಿ ಕೋಟ್ಯಧೀಶನಾಗಿದ್ದಾನೆ. ಆದರೆ ಈಗ ಮಾತ್ರ ಜೈಲಿನ ಖಾಯಂ ವ್ಯಕ್ತಿ. ಅಷ್ಟಕ್ಕೂ ಈತನ ಈ ಶ್ರೀಮಂತಿಕೆಯ ಹಿಂದಿರುವ ಅಸಲಿ ಗುಟ್ಟೇನು ಗೊತ್ತಾ? ಮುಂದೆ ಓದಿ

ಬಂಧನವಾದ ಕೋಟ್ಯಧಿಪತಿ, ಕೋಟೇಶ್ವರರಾವ್ ಕ್ವಾರಿಯೊಂದರಲ್ಲಿ ಕೂಲಿ ಕೆಲಸಕ್ಕೆ ಬಾಗೇಪಲ್ಲಿಗೆ ಬಂದಿದ್ದ. ಆದರೆ ಕೂಲಿ ಕೆಲಸ ಮಾಡುತಿದ್ದ ಕೋಟೇಶ್ವರರಾವ್ ಬಾಗೇಪಲ್ಲಿ ಪಟ್ಟಣದ 5ನೇ ವಾರ್ಡಿನಲ್ಲಿ ಎರಡು ಬೃಹತ್ ಕಟ್ಟಡಗಳು, ಹಾಗೂ ಕಾರಕೂರು ಕ್ರಾಸ್ ಬಳಿ ಕೋಟಿ ಕೋಟಿ ಕೊಟ್ಟು ಜಮೀನು ಖರೀದಿ ಮಾಡಿದ್ದಲ್ಲದೇ ಬೃಹತ್ ಕಲ್ಯಾಣ ಮಂಟಪ ಕಟ್ಟುತ್ತಿದ್ದಾನೆ. ಕೂಲಿ ಕೆಲಸ ಮಾಡ್ತಿದ್ದವ ಇಷ್ಟೊಂದು ಆಸ್ತಿ ಹೇಗೆ ಮಾಡೋಕೆ ಸಾಧ್ಯನಾ ಅಂತ ಕೋಟೇಶ್ವರರಾವ್ ಬೆನ್ನುಬಿದ್ದ ಪೊಲೀಸರಿಗೆ ಅವನ ಅಕ್ರಮ ಸಂಪಾದನೆಯ ಹಾದಿ ಗೊತ್ತಾಗಿದೆ.

ಕೂಲಿ ಕೆಲಸಕ್ಕೆ ಅಂತ ಬಂದ ಕೋಟೇಶ್ವರರಾವ್ ಕೂಲಿ ಕೆಲಸದ ಜೊತೆ ಜೊತೆಗೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಕಲಿ ಗಣಿ ಪರ್ಮಿಟ್ಸ್ ಹಾಗೂ ಲೈಸೆನ್ಸ್ ತಯಾರಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದ. ಕದ್ದು ಮುಚ್ಚಿ ಕಳೆದ 10 ವರ್ಷಗಳಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಗಣಿ ಇಲಾಖೆಯ ನಕಲಿ ಪರವಾನಿಗೆ ಹಾಗೂ ಪರ್ಮಿಟ್ಸ್‌ಗಳನ್ನ ಸೃಷ್ಟಿಸಿ ಮೂರು ರಾಜ್ಯಗಳಿಗೆ ವಂಚನೆ ಮಾಡುತ್ತಿದ್ದ. ಆದ್ರೆ ಬಾಗೇಪಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಇವನ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ತಯಾರಿಸಿದ್ದ ನಕಲಿ ಪರವಾನಿಗೆ-ಪರ್ಮಿಟ್ಸ್ ಪತ್ರಗಳು ಹಾಗೂ ತಯಾರಿಗೆ ಬಳಸಲಾಗುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ಹಾಗೂ ಹಾಲೋಗ್ರಾಂ ತಯಾರಿಕಾ ಯಂತ್ರವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಹತ್ತಕ್ಕೂ ಹೆಚ್ಚು ವರ್ಷಗಳಿಂದಲೂ ಕೋಟೇಶ್ವರರಾವ್ ಗಣಿ ಇಲಾಖೆಯ ನಕಲಿ ಪರವಾನಿಗೆ ಪರ್ಮಿಟ್ಸ್ ಸೃಷ್ಟಿ ಮಾಡುತ್ತಿದ್ರೂ ಎಲ್ಲಿಯೂ ಸಿಕ್ಕಿ ಹಾಕಿಕೊಂಡಿರಲಿಲ್ಲ. ಆದ್ರೆ ಈಗ ಬಾಗೇಪಲ್ಲಿ ಪೊಲೀಸರು ಈ ಖತರ್ನಾಕ್ ಖದೀಮನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Leave A Reply

Your email address will not be published.