ಬೆಳ್ತಂಗಡಿ : SDM ಪಿಯು ಕಾಲೇಜ್ ಹಿಂಭಾಗದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳ್ತಂಗಡಿ : ಉಜಿರೆ ಪಿಯು ಕಾಲೇಜು ಹಿಂಭಾಗದ ನಾಗರಾಜ ಕಾಂಪೌಂಡ್ ಏರಿಯಾದಲ್ಲಿನ ಮನೆಯೊಂದರ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ.

ಹೊಟೇಲ್ ಹೊಂದಿರುವ ಉದ್ಯಮಿ ಶಂಕರ್ ಶೆಟ್ಟಿ ಎಂಬುವವರ ಶ್ರೀ ದುರ್ಗಾ ನಿಲಯ ಎಂಬ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಆದರೆ ಈ ಮನೆಯವರು ಮೈಸೂರಿನಲ್ಲಿ ನೆಲೆಸಿದ್ದು, ಈ ಮನೆಗೆ ಬೀಗ ಹಾಕಿತ್ತು. ಒಂದು ವಾರದ ಹಿಂದೆ ಮನೆಯವರು ಬಂದಾಗ ಬಾವಿಯನ್ನು ಗಮನಿಸಿದ್ದರು. ಆದರೆ, ಇವರು ಮೃತ ದೇಹದ ತಲೆಯನ್ನು ತೆಂಗಿನಕಾಯಿ ಎಂದುಕೊಂಡು ವಾಪಾಸ್ ಆಗಿದ್ದರು.

ಆದರೆ ನಿನ್ನೆಯಿಂದ ಯಾವುದೋ ಮೃತದೇಹದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಪಕ್ಕದ ಮನೆಯ ನಿವಾಸಿ ಶ್ರೀಧರ್ ಗೌಡ, ಇಂದು ಬಂದು ಸುತ್ತಮುತ್ತ ಪರಿಶೀಲನೆ ಮಾಡಿದ್ದಾರೆ. ಬಳಿಕ ಬಾವಿಯಲ್ಲಿ ಮೃತ ದೇಹವಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಮನೆಯ ಮಾಲೀಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನಂತರ ಮುಳುಗು ತಜ್ಞರಾದ ಗಾಂಧಿನಗರದ ಶಿಯಾಬ್, ಸಂಜಯನಗರ ಇಸ್ಮಾಯಿಲ್,ಕುಂಟಿನಿ ರಝಕ್, ಕುಂಟಿನಿ ರಫೀಕ್, ಆಂಬುಲೆನ್ಸ್ ಚಾಲಕ ಜಲಿಲ್ ಬಾಬಾ ಅವರನ್ನು ಕರೆಸಿ ಶವ ಮೇಲಕ್ಕೆತ್ತಿದ್ದಾರೆ.

ಶವ ಗಂಡಸಿನದ್ದಾಗಿದ್ದು ಬಲ ಕೈಯಲ್ಲಿ ‘ಮಂಜುಳಾ’ ಎಂಬುವುದಾಗಿ ಟ್ಯಾಟು ಹಾಕಿದ್ದಾರೆ, ಶವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಗಾರಕ್ಕೆ ಸಾಗಿಸಿದ್ದು, ಈ ಬಗ್ಗೆ
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಎಸ್ ಐ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.