“ಸರ್ಕಾರಿ ಕೆಲಸ ಕೊಡಿ, ಇಲ್ಲ ಕೊಳವೆಬಾವಿ ತೋಡಿಸಿಕೊಡಿ” ಎಂದು ಮನವಿ ಪತ್ರ ಬರೆದು ಮತ ಪೆಟ್ಟಿಗೆಗೆ ಹಾಕಿದ ಯುವಕ

ಮೈಸೂರು‌: ಮತದಾನಕ್ಕೆ ಹೋದಾಗ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಿ ಬರುವುದನ್ನು ನೋಡಿದ್ದೇವೆ. ಆದ್ರೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ವೇಳೆ ಅಪರೂಪದ ಘಟನೆ ನಡೆದಿದೆ.

ಹೌದು. ಇಲ್ಲೊಬ್ಬ ಮತ ಚಲಾಯಿಸುವ ಬದಲು ತಮ್ಮ ಕೋರಿಕೆಗಳನ್ನು ಬರೆದು, ಮನವಿ ಪತ್ರವನ್ನು ಮತ ಪೆಟ್ಟಿಗೆಗೆ ಹಾಕಿರುವುದು ಮತ ಎಣಿಕೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಇನ್ನೊಬ್ಬ ಮತದಾರ ಯಾರು ದುಡ್ಡು ಕೊಟ್ಟಿಲ್ಲ ಅಂತಾ ಚುನಾವಣಾ ಅಭ್ಯರ್ಥಿಗಳ ವಿರುದ್ಧ ಕಿಡಿಕಾರಿದ್ದಾರೆ.

“ನಾನು ಎಂ.ಎ, ಬಿ.ಎಡ್ ಮಾಡಿದ್ದೇನೆ. ಆದರೆ, ನನಗೆ ಕೆಲಸ ಇಲ್ಲ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿಯ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ. ಇಲ್ಲ ಅಂದ್ರೆ ಜಮೀನಿನಲ್ಲಿ‌ ಕೊಳವೆಬಾವಿ ತೋಡಿಸಿಕೊಡಿ” ಎಂದು ಮನವಿ ಪತ್ರ ಬರೆದು ಮತಪೆಟ್ಟಿಗೆಯಲ್ಲಿ ಹಾಕಿದ್ದಾನೆ. ಇದಿಷ್ಟೇ ಅಲ್ಲದೆ, ಪೆಟ್ರೋಲ್ ಬೆಲೆ ಇಳಿಸಲು ಮನವಿ ಮಾಡಿದ್ದಾನೆ. ರಸಗೊಬ್ಬರ ಬೆಲೆ ಕಡಿಮೆ ಮಾಡುವಂತೆಯೂ ಕೇಳಿಕೊಂಡಿದ್ದಾನೆ. ಸದ್ಯ ಯುವಕ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅಂದಹಾಗೆ ಪತ್ರ ಬರೆದ ಯುವಕನ ಹೆಸರು ರಾಜೇಂದ್ರ. ಈತ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ನಿವಾಸಿ. ರಾಜೇಂದ್ರ ಮಾತ್ರವಲ್ಲದೆ, ಅನೇಕರು ಮತ ಪೆಟ್ಟಿಯೊಳಗಡೆ ವಿಭಿನ್ನ ಕೊರಿಕೆಯ ಪತ್ರಗಳನ್ನು ಹಾಕಿದ್ದಾರೆ. ಬ್ಯಾಲೆಟ್ ಪತ್ರ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಯಾವ ಅಭ್ಯರ್ಥಿಗಳು ಕೂಡ ಹಣ ಕೊಟ್ಟಿಲ್ಲ ಎಂದು ಬ್ಯಾಲೇಟ್ ಪೇಪರ್ ಮೇಲೆ ಮತದಾರ ಬರೆದಿದ್ದಾನೆ.

Leave A Reply

Your email address will not be published.