ಶಾಲೆಗೆ ಮಕ್ಕಳು ಬರದಿದ್ದರೆ ಅವರ ಮನೆ ಮುಂದೆಯೇ ವಿಶೇಷ ಧರಣಿ ಮಾಡಿ ಸಂಚಲನ ಸೃಷ್ಟಿಸಿದ ಹೆಡ್ ಮಾಸ್ಟರ್ !!!

ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಲು ಮುಖ್ಯೋಪಾಧ್ಯಾಪಕರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಹೌದು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುವಂತೆ ಪಾಲಕರ ಮನವೊಲಿಸಲು ಶಾಲಾ ಹೆಡ್ ಮಾಸ್ಟರ್ ಒಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

ಸಂಗಾರೆಡ್ಡಿ ಜಿಲ್ಲೆಯ ಪುಳಕಲ್ ವಲಯದ ಮಾಣಿಕ್ಯಂ ಗ್ರಾಮದಲ್ಲಿ ಇಂತಹದ್ದೊಂದು ವಿಶಿಷ್ಟ ಪ್ರತಿಭಟನೆ ನಡೆದಿದ್ದು, ಎಲ್ಲರ ಗಮನ ಸೆಳೆದಿದೆ. ಇಲ್ಲಿನ ಜಿಲ್ಲಾ ಪರಿಷದ್ ಸರ್ಕಾರಿ ಶಾಲೆಯಲ್ಲಿ 175 ಮಕ್ಕಳು ಓದುತ್ತಿದ್ದಾರೆ. ಇದರಲ್ಲಿ 8 ವಿದ್ಯಾರ್ಥಿಗಳು ಈ ವರ್ಷ ಶಾಲೆ ಆರಂಭವಾದಾಗಿನಿಂದಲೂ ಶಾಲೆಗೆ ಬರುತ್ತಿಲ್ಲ. ಇದನ್ನು ಗಮನಿಸಿದ ಮುಖ್ಯೋಪಾಧ್ಯಾಪಕ ಶ್ರೀಧರ ರಾವ್, ಪಾಲಕರ ಬಳಿ ವಿಚಾರಿಸಲು ಆ ಮಕ್ಕಳ ಮನೆಗೆ ಹೋಗಿದ್ದರು.

ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ಎಷ್ಟೇ ಮನವಿ ಮಾಡಿದರೂ ಅವರು ಜಗ್ಗಲಿಲ್ಲ. ಆದರೆ, ಇಷ್ಟಕ್ಕೆ ಪಟ್ಟು ಬಿಡದ ಮುಖ್ಯಾಧ್ಯಾಪಕ ಶ್ರೀಧರ್ ರಾವ್, ಆ ಮಕ್ಕಳ ಮನೆ ಮುಂದೆ ಮಲಗಿ ಪ್ರತಿಭಟನೆ ಆರಂಭಿಸಿಬಿಟ್ಟರು. ಇದನ್ನು ನೋಡಿದ ಪಾಲಕರು ಕೊನೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದರು.

ಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳು ಶಾಲೆಗೆ ಹಾಜರಾಗುವವರೆಗೂ ತಮ್ಮ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಶ್ರೀಧರ್ ರಾವ್ ಹೇಳಿದ್ದಾರೆ. ಸದ್ಯ ಮುಖ್ಯೋಪಾಧ್ಯಾಪಕರ ಪ್ರತಿಭಟನೆಯಿಂದ ಗ್ರಾಮದಲ್ಲಿ ವಿದ್ಯಾಭ್ಯಾಸದ ಮಹತ್ವದ ಬಗ್ಗೆ ಜನರಲ್ಲಿ ಹೊಸ ಸಂಚಲನ ಮೂಡಿದ್ದು ಮಾತ್ರ ಸತ್ಯ.

Leave A Reply

Your email address will not be published.