ಈ ಗ್ರಾಮದಲ್ಲಿ ಇಂದಿಗೂ ಚಪ್ಪಲಿ, ಶೂ ಧರಿಸಲು ಅನುಮತಿಯೇ ಇಲ್ಲವಂತೆ!, ಕಾರಣ??

ಹಿಂದಿನ ಕಾಲದಲ್ಲೆಲ್ಲ ಚಪ್ಪಲಿ ಎಂಬುದು ಇದ್ದಿದ್ದೇ ಕಡಿಮೆ. ಬರಿಗಾಲಲ್ಲೇ ಪ್ರಯಾಣ ಬೆಳೆಸುತ್ತಿದ್ದರು. ಇಂದಿನ ಕಾಲ ಹೇಗಾಗಿದೆ ಅಂದ್ರೆ, ಪಾದರಕ್ಷೆ ಇಲ್ಲದೆ ಒಂದೆಜ್ಜೆನು ನಡೆಯಲು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಆದ್ರೆ ಈ ಗ್ರಾಮದಲ್ಲಿ ಇಂದಿಗೂ ಯಾರು ಚಪ್ಪಲಿ, ಶೂ ಧರಿಸುವುದೇ ಇಲ್ಲವಂತೆ. ಯಾಕಂದ್ರೆ ಇಲ್ಲಿ ಹಾಕಲು ಅನುಮತಿಯೇ ಇಲ್ಲವಂತೆ!

ಹೌದು. ನಮ್ಮ ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಸಂಸ್ಕೃತಿಯುತವಾಗಿ ಹೊರಹೊಮ್ಮತ್ತಲೇ ಇದೆ. ಹಿಂದಿನಿಂದಲೂ ಆಚರಿಸಿಕೊಂಡು ಬಂದ ಸಂಪ್ರದಾಯದಂತೆ ಮನೆ ಒಳಗೆ ಮತ್ತು ದೇವಾಲಯಗಳಲ್ಲಿ ಪಾದರಕ್ಷೆಗಳನ್ನು ಧರಿಸುವುದಿಲ್ಲ. ಆದ್ರೆ, ತಮಿಳುನಾಡಿನ ಈ ಗ್ರಾಮದ ಒಳಗೆಯೇ ಶೂ ಮತ್ತು ಚಪ್ಪಲಿಗೆ ಅನುಮತಿಯೇ ಇಲ್ಲ. ಇಲ್ಲಿ ಜನರು ಬರಿಗಾಲಿನಲ್ಲೇ ನಡೆದಾಡಬೇಕು!. ಇದು ವಿಚಿತ್ರ ಅನಿಸಿದರೂ ಸತ್ಯ. ಅಷ್ಟಕ್ಕೂ ಅದರ ಹಿಂದಿರುವ ಕಾರಣ ಏನೆಂಬುದು ನೋಡೋಣ.

ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ವೆಲ್ಲಗಾವಿ ಎಂಬ ಸಣ್ಣ ಗ್ರಾಮವು ಈ ಪದ್ಧತಿಯನ್ನು ಅನುಸರಿಸುತ್ತಿದೆ. ಇಲ್ಲಿ ಯಾರಾದರೂ ಪಾದರಕ್ಷೆ ಧರಿಸಿರುವುದು ಕಂಡು ಬಂದರೆ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಇಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಅವರಿಗೆ ರಸ್ತೆಗಳಿಲ್ಲ ಮತ್ತು ಹಳ್ಳಿಯನ್ನು ತಲುಪಲು ಕಷ್ಟದ ಹಾದಿಯಲ್ಲಿ ನಡೆದು ಸಾಗಬೇಕು.

ಈ ಗ್ರಾಮದ ಪ್ರವೇಶ ದ್ವಾರದಲ್ಲಿ ಒಂದು ದೊಡ್ಡ ಮರವಿದ್ದು, ಅದನ್ನು ಅನೇಕ ಜನರು ಪೂಜಿಸುತ್ತಾರೆ. ನಿವಾಸಿಗಳ ಧಾರ್ಮಿಕ ನಂಬಿಕೆಗಳ ಕಾರಣದಿಂದ ಪಾದಗಳ ಮೇಲೆ ಏನನ್ನೂ ಧರಿಸಲು ನಿಮಗೆ ಅನುಮತಿಸದ ಸ್ಥಳ ಇದಾಗಿದೆ. ಗ್ರಾಮಸ್ಥರು ತಮ್ಮ ಗ್ರಾಮವನ್ನು ದೇವರ ಮನೆ ಎಂದು ನಂಬುತ್ತಾರೆ. ಆದ್ದರಿಂದ ಎಷ್ಟೇ ಬಿಸಿಲಿದ್ದರೂ ಚಪ್ಪಲಿ, ಬೂಟುಗಳನ್ನು ಧರಿಸಿದವರು ಇಲ್ಲಿ ಯಾರೂ ಕಾಣುವುದಿಲ್ಲ. ಯಾರಾದರೂ ಈ ನಂಬಿಕೆಗೆ ವಿರುದ್ಧವಾಗಿ ಹೋದರೆ, ದೇವತೆ ಕೋಪಗೊಳ್ಳುತ್ತಾನೆ ಎಂದು ಜನರು ನಂಬುತ್ತಾರೆ.

ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ವಯಸ್ಸಾದವರಿಗೆ ಮಾತ್ರ ವಿನಾಯಿತಿಯಿದೆ. ಮನೆಗಳ ನಡುವೆ ಮತ್ತು ಗ್ರಾಮದ ಕೊನೆಯಲ್ಲಿ 25 ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಒಂದೇ ಒಂದು ಸಣ್ಣ ಚಹಾ ಮತ್ತು ಸರಬರಾಜು ಅಂಗಡಿ ಇದೆ. ಹೀಗಾಗಿ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಅಗತ್ಯಗಳಿಗಾಗಿ ಹತ್ತಿರದ ಪಟ್ಟಣಕ್ಕೆ ಪ್ರಯಾಣಿಸುತ್ತಾರೆ. ಇಷ್ಟೇ ಅಲ್ಲದೇ, ಅನೇಕ ನಿರ್ಬಂಧಗಳು ಇರುವುದರಿಂದ ಇಡೀ ಗ್ರಾಮದ ಜನತೆ ಸಂಜೆ 7 ಗಂಟೆಯಷ್ಟರಲ್ಲೇ ಮಲಗುತ್ತದೆ. ಜೋರಾಗಿ ಮಾತನಾಡಲು, ಸಂಗೀತವನ್ನು ಕೇಳಲು ಅಥವಾ ಯಾವುದೇ ದೊಡ್ಡ ಧ್ವನಿಯನ್ನು ಪ್ಲೇ ಮಾಡಲು ಯಾರಿಗೂ ಅನುಮತಿ ಇಲ್ಲ. ಇಂತಹ ನಿರ್ಬಂಧಗಳ ನಡುವೆಯೂ ಗ್ರಾಮದ ಜನರು ನೆಮ್ಮದಿಯಿಂದ ಇದ್ದಾರೆ.

ಒಟ್ಟಾರೆ, ಈ ಗ್ರಾಮವು ಏಕಾಂತವನ್ನು ಹುಡುಕುವ ಜನರಿಗೆ ಸ್ವರ್ಗವಾಗಿದೆ. ಯಾವುದೇ ರಸ್ತೆ ಸಂಪರ್ಕವಿಲ್ಲದ ಕಾರಣ, ಗ್ರಾಮವನ್ನು ತಲುಪಲು ಟ್ರೆಕ್ಕಿಂಗ್ ಮಾರ್ಗವಾಗಿದ್ದು, ಪ್ರವಾಸಿಗರಿಗೆ ಹೊಸ ಅನುಭವದ ಜೊತೆಗೆ ಒಳ್ಳೆಯ ಯಾತ್ರೆ ಮುಗಿಸಲು ಉತ್ತಮವಾದ ಪ್ರದೇಶವೆಂದೇ ಹೇಳಬಹುದು.

Leave A Reply

Your email address will not be published.