ಭಾರವಾಯಿತೇ ಈ ಜಗತ್ತು ಅಮ್ಮಾ?!!! 9 ತಿಂಗಳ ಮಗುವಿನ ಜೊತೆಗೆ ನೇಣಿಗೆ ಕೊರಳೊಡ್ಡಿದ ತಾಯಿ!

ಅದೇನು ದುಃಖ ಮನಸ್ಸಿನಲ್ಲಿ ಆಕೆ ಹೊತ್ತುಕೊಂಡು ಇದ್ದಳೋ, ಯಾವ ಮಟ್ಟಕ್ಕೆ ಮಾನಸಿಕ ಯಾತನೆಯನ್ನು ಈ ತಾಯಿ ಸಹಿಸಿಕೊಂಡಿದ್ದಳೇ ಕಡೆಗೊಂದು ದಿನ ತನ್ನ ಕಡೇ ನಿರ್ಧಾರ ಅಂದರೆ ಜೀವನವನ್ನೇ ಕೊನೆಗಾಣಿಸುವ ಕಡೇ ನಿರ್ಧಾರ ಮಾಡಿಕೊಂಡಳು ಈ ಮಹಾತಾಯಿ ತನ್ನ 9 ತಿಂಗಳ ಮಗುವಿನ ಜೊತೆ. ಪುಟ್ಟ ಹಸಯಳೆಯನ್ನು ಕೊಲೆ ಮಾಡಿದ ತಾಯಿಯೊಬ್ಬಳು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.

ನಿಖಿತಾ (25) ಹಾಗೂ ಅನೀಶ್ (9 ತಿಂಗಳು) ಸಾವು ಕಂಡಿರುವ ತಾಯಿ-ಮಗುವಾಗಿದ್ದು, ಜಗಳೂರು ಪಟ್ಟಣದ ಜೆಸಿಆರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಅಂದ ಹಾಗೇ ಒಂದು ವರ್ಷದ ಹಿಂದೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ಮನೋಜ್ ಕುಮಾರ್ ಜೊತೆ ವಿವಾಹವಾಗಿದ್ದ ನಿಖಿತಾ ನಿನ್ನೆ ಇದ್ದಕ್ಕಿದ್ದಂತೆ ಮಗನೊಂದಿಗೆ ಜಗಳೂರಿನ ಜೆಸಿಆರ್ ಬಡಾವಣೆಯಲ್ಲಿರುವ ತನ್ನ ತವರಿಗೆ ಬಂದಿದ್ದರು. ಈ ವೇಳೆ ಶಿಕ್ಷಕರಾಗಿದ್ದ ತಂದೆ ತಾಯಿಗಳಿಬ್ಬರು ಇಂದು ಬೆಳಗ್ಗೆ ಶಾಲೆಗೆ ಹೋದ ನಂತರ ನಿಖಿತಾ ಮೊದಲು ಮಗನನ್ನು ನೇಣಿನ ಕುಣಿಕೆಗೆ ಹಾಕಿ ಕೊಂದು ಬಳಿಕ ತಾನು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ.

ಇನ್ನು ಮನೋಜ್ ಹಾಗೂ ನಿಖಿತಾ ನಡುವೆ ಎಲ್ಲವೂ ಸರಿ ಇರಲ್ಲಿಲ್ಲ ಎನ್ನಲಾಗಿದ್ದು, ಆರು ಲಕ್ಷ ರೂಪಾಯಿ ವರದಕ್ಷಿಣೆ, ಚಿನ್ನಾಭರಣ ಕೊಟ್ಟು ವಿವಾಹ ಮಾಡಿಕೊಟ್ಟಿದ್ದರೂ ಪ್ರತಿ ದಿನ ಮನೋಜ್ ಆಕೆಯನ್ನು ನಿಂದಿಸುವ ಜೊತೆಗೆ ತನ್ನ ತಾಯಿ ಮಾತು ಕೇಳಿಕೊಂಡು ತವರಿನಿಂದ ಹಣ,ಒಡವೆ ತರುವಂತೆ ಪೀಡಿಸುತ್ತಿದ್ದ ಎಂದು ಮೃತಳ ಪೋಷಕರು ದೂರಿದ್ದಾರೆ.

ಇದಲ್ಲದೆ, ಮದುವೆಯಾದಾಗಿನಿಂದಲೂ ನಿಖಿತಾಗೆ ಕಿರುಕುಳ ಕೊಡುತ್ತಿದ್ದ ಮನೋಜ್ ಆಕೆಯನ್ನು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಜೊತೆಗೆ ಬೇರೆಯವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.ಇದರಿಂದ ಮನನೊಂದು ನಿಖಿತಾ ತನ್ನ 9 ತಿಂಗಳ ಮಗುವನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ,

ಇದೇ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಜಗಳೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.