ಬಂಟ್ವಾಳ : ಭೀಕರ ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಮೃತ್ಯು!!

ಬಂಟ್ವಾಳದಲ್ಲಿ ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಭೀಕರ ರಸ್ತೆ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಸೊರ್ನಾಡು ಎಂಬಲ್ಲಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದೆ.

ಮೃತ ಯುವಕರನ್ನು ಲೊರೆಟ್ಟೋ ಪದವು ನಿವಾಸಿಗಳಾದ ನಿತಿನ್ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ.

ಮೃತರಲ್ಲಿ ಓರ್ವ ಮೆಕ್ಯಾನಿಕ್ ಆಗಿದ್ದು, ಇನ್ನೊರ್ವ ಪಿಕ್ ಅಪ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕರ್ತವ್ಯ ಮುಗಿಸಿ ಇಬ್ಬರೂ ಒಂದೇ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಆಗ ಯಮವೇಗದಲ್ಲಿ ಬಂದ ಟಿಪ್ಪರ್ ಇಬ್ಬರನ್ನೂ ಬಲಿ ಪಡೆದಿದೆ.

ಬಿಸಿ ರೋಡ್ ನಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಅಪಘಾತ ಎಸಗಿದ ಬಳಿಕ ಚಾಲಕ ಲಾರಿ ಸಮೇತ ಸ್ಥಳದಿಂದ ಪರಾರಿಯಾಗಿದ್ದ.

ಆದರೆ ಕೂಡಲೇ ಪ್ರತ್ಯಕ್ಷದರ್ಶಿಗಳ ಮಾಹಿತಿಯ ಮೇರೆಗೆ ಸ್ಥಳೀಯರು ಬೆನ್ನಟ್ಟಿ ಟಿಪ್ಪರ್ ಅನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದರು. ನಂತರ ಟಿಪ್ಪರ್ ಡ್ರೈವರ್ ಅನ್ನು ಬಂಟ್ವಾಳ ಟ್ರಾಫಿಕ್ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.