ಹಾಡಹಗಲೇ ಬಾಲಕನ ಅಪಹರಣ-ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಮರಳಿ ಹೆತ್ತಬ್ಬೆಯ ಮಡಿಲಿಗೆ

ಕಳೆದ ಬಾರಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಇಳಿ ಸಂಜೆಯ ಹೊತ್ತಿಗೆ ತನ್ನ ಅಜ್ಜನೊಂದಿಗೆ ವಾಕಿಂಗ್ ತೆರಳುತ್ತಿದ್ದ ಬಾಲಕನ ಅಪಹರಣ ನಡೆದು, 24 ಗಂಟೆಯೊಳಗೆ ಮರಳಿ ಪೋಷಕರ ಮಡಿಲು ಸೇರಿದ ಘಟನೆಯು ಮಾಸುವ ಮುನ್ನವೇ ಅಂತಹುದೇ ಅಪಹರಣ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಿಡ್ನಾಪ್ ಪ್ರಕರಣವೊಂದು, ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸಹಿತ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಪ್ರಶಂಸೆಗೆ ಪಾತ್ರವಾಗಿದೆ.

ಘಟನೆ ವಿವರ:ಜೂನ್ 07ರ ಸಂಜೆಯ ವೇಳೆಗೆ ಬಿ.ಎಂ.ಟಿ.ಸಿ ಚಾಲಕ ಸುಭಾಷ್ ಎಂಬವರ ಪುತ್ರನನ್ನು ಅಪಹರಣ ಮಾಡಿದ್ದು, ಬಳಿಕ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ರಾತ್ರಿ ಸುಮಾರು 09ರ ವೇಳೆಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಕಾರ್ಯಚರಣೆಗೆ ಇಳಿದಿದ್ದು,ಆರೋಪಿಗಳು ಕರೆ ಮಾಡಿದ ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ ಜಿಗಣೆ ಸಮೀಪದ ಫಾರ್ಮ್ ಹೌಸ್ ಒಂದರಲ್ಲಿ ಆರೋಪಿಗಳು ಮಗುವನ್ನು ಅಪಹರಿಸಿಟ್ಟಿರುವುದು ತಿಳಿಯುತ್ತದೆ.

ಕೂಡಲೇ ಪೊಲೀಸರು ಆ ಪ್ರದೇಶವನ್ನು ಸಿನಿಮೀಯ ರೀತಿಯಲ್ಲಿ ಸುತ್ತುವರಿದು ಕಾರ್ಯಚರಣೆ ನಡೆಸಿದ್ದು, ಅಪಹರಣವಾದ ಬಾಲಕನನ್ನು ಜೀವಂತವಾಗಿ ಪೋಷಕರ ಮಡಿಲಿಗೆ ಸೇರಿಸಲಾಗಿದೆ. ಅಪಹರಣ ಕೃತ್ಯವನ್ನು ಮಹಿಳೆಯೊಬ್ಬರು ನಡೆಸಿದ್ದು, ಬಳಿಕ ನೇಪಾಲ ಮೂಲದ ವ್ಯಕ್ತಿಯೊಬ್ಬರಿಗೆ ನೀಡಿದ್ದಾಗಿ ತಿಳಿದು ಬಂದಿದ್ದು, ಮಹಿಳೆಯ ಪತ್ತೆಗೆ ಬಲೆ ಬೀಸಲಾಗಿದೆ.

Leave A Reply

Your email address will not be published.