ದೇವಸ್ಥಾನದಲ್ಲಿ ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ದೇವರ ವಿಗ್ರಹವನ್ನು ಕದ್ದೊಯ್ದ ದುಷ್ಕರ್ಮಿಗಳು !!

ದೇವಸ್ಥಾನವೊಂದರೊಳಗೆ ಅರ್ಚಕರೊಬ್ಬರು ಶವವಾಗಿ ಪತ್ತೆಯಾಗಿದ್ದು, ದೇವರ ವಿಗ್ರಹ ಕಾಣೆಯಾಗಿರುವ ಘಟನೆ ಜೈಪುರದ ಬುಂದಿ ಜಿಲ್ಲೆಯಲ್ಲಿ ನಡೆದಿದೆ.

ತಾರಾಗಢ ಬೆಟ್ಟದ ಮೇಲಿರುವ ದೋಬ್ರಾ ಮಹಾದೇವ ದೇವಸ್ಥಾನದಲ್ಲಿ ಬೆಳಗ್ಗೆ ಭಕ್ತರು ಬರುವಾಗ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ವಿವೇಕಾನಂದ ಶರ್ಮಾ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಭಕ್ತಾದಿಗಳು ಇದನ್ನು ನೋಡಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ವಿಗ್ರಹವನ್ನು ರಕ್ಷಿಸುವ ಸಂದರ್ಭದಲ್ಲಿ ಅರ್ಚಕನನ್ನು ಕೊಂದಿರುವ ಸಾಧ್ಯತೆಯಿದೆ. ಅರ್ಚಕರ ದೇಹದ ಮೇಲಿನ ಗಾಯಗಳನ್ನು ಪರಿಶೀಲಿಸಿದಾಗ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ದಾಳಿಕೋರರು ಹಲ್ಲೆ ಮಾಡಿ ಕೊಂದಿರುವ ಸಾಧ್ಯತೆ ಇದೆ ಎಂದು ಬುಂಡಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಿ ಲಾಲ್ ಹೇಳಿದ್ದಾರೆ.

ಅರ್ಚಕರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಗುತ್ತಿಗೆ ಉದ್ಯೋಗವನ್ನು ಘೋಷಿಸುವವರೆಗೂ ಶವದ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿ ಕೆಲವು ಸಮುದಾಯದವರು ಪ್ರತಿಭಟನೆ ನಡೆಸಿದರು. ಇವರ ಬೇಡಿಕೆಗಳಿಗೆ ಜಿಲ್ಲಾಡಳಿತ ಸಮ್ಮತಿಸಿದ ಹಿನ್ನೆಲೆ ಶವ ಪರೀಕ್ಷೆ ನಡೆಸಲಾಗಿದೆ.

ಅಪರಿಚಿತ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.