ಕೊನೇ ಕ್ಷಣದಲ್ಲಿ ಮದುವೆಯಾಗಲು ಒಲ್ಲೆ ಎಂದ ನಲ್ಲೆ-! ಬರಸಿಡಿಲು ಬಡಿದ ವರನ ಬಾಳಿಗೆ ಎಂಟ್ರಿಯಾದಳು ಅಪ್ಸರೆ

ಇನ್ನೇನು ಹಸೆಮಣೆ ಏರಲು ಎರಡು ದಿನ ಬಾಕಿ ಇತ್ತು. ಮದುವೆಗೆ ಬೇಕಾದ ಎಲ್ಲಾ ತಯಾರಿ ನಡೆದು,ವರ ವಧುವಿಗೆ ತಾಳಿ ಕಟ್ಟಿ ಮನೆ ತುಂಬಿಸಿಕೊಳ್ಳುವ ಖುಷಿಯು ಧಾರಾ ಮುಹೂರ್ತದ ಒಂದು ದಿನದ ಹಿಂದೆ ವಧು ಮದುವೆಯನ್ನು ತಿರಸ್ಕರಿಸಿದ ಪರಿಣಾಮ ಮುರಿದುಬಿದ್ದಿದ್ದು, ಎರಡೂ ಮನೆಯವರು ಪರಸ್ಪರ ಮಾತಿನ ಚಕಮಕಿ ನಡೆಸಿಕೊಂಡು, ವರನು ಅದೇ ಮುಹೂರ್ತದಲ್ಲಿ ಇನ್ನೊಬ್ಬ ಯುವತಿಗೆ ತಾಳಿ ಕಟ್ಟುವ ಮೂಲಕ ಮದುವೆ ನಡೆದೇ ಹೋಯಿತು.

ಇಂತಹದೊಂದು ಘಟನೆ ಬೆಳಕಿಗೆ ಬಂದಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಯುವಕನಿಗೆ ಜೂನ್ ಒಂದರಂದು ಮಡಿಕೇರಿಯ ಯುವತಿಯೊಂದಿಗೆ ಮದುವೆ ನಿಗದಿಯಾಗಿತ್ತು. ಅದರಂತೆ ಎಲ್ಲಾ ರೀತಿಯ ಸಿದ್ಧತೆಗಳೂ ನಡೆದಿತ್ತು. ಆದರೆ ಮದುವೆಗೆ ಇನ್ನೇನು ಎರಡು ದಿನ ಬಾಕಿ ಇರುವಾಗಲೇ ಯುವತಿ ವರನನ್ನು ತಿರಸ್ಕರಿಸಿದ್ದು, ದಿಢೀರ್ ನಿರ್ಧಾರದಿಂದ ಯುವಕನ ಕುಟುಂಬವು ಆಘಾತಕ್ಕೊಳಗಾಗಿದೆ.

ಕೊನೆಗೆ ಪ್ರಕರಣ ಠಾಣೆ ಮೆಟ್ಟಿಲೇರಿದ್ದು,ರಾಜಿ ಪಂಚಾಯ್ತಿ ನಡೆದು ಯುವತಿಯ ಮನವೊಲಿಸುವ ಪ್ರಯತ್ನವೂ ಫಲ ನೀಡಲಿಲ್ಲ. ಯುವತಿ ಆತನನ್ನು ವರಿಸುವುದಿಲ್ಲ ಎಂದು ಹಠ ಹಿಡಿದಾಗ ದಾರಿ ತೋಚದೆ ಮದುವೆಯನ್ನೇ ನಿಲ್ಲಿಸಲಾಗಿತ್ತು. ಹೆಣ್ಣಿನ ಕಡೆಯವರು ಮದುವೆಗೆ ಆದ ಖರ್ಚುನ್ನು ಭರಿಸುವ ಭರವಸೆಯ ಒಪ್ಪಂದದ ಮೇರೆಗೆ ವರನು ತನ್ನ ಕುಟುಂಬ ಸಮೇತ ಮನೆಯತ್ತ ಹೆಜ್ಜೆ ಹಾಕಿದ್ದನು.

ಬಳಿಕ ವರನ ಕಡೆಯವರು ತಮಿಳುನಾಡಿನ ಸಂಬಂಧಿ ಯುವತಿಯೊಂದಿಗೆ ಅದೇ ದಿನ ದೇವಸ್ಥಾನವೊಂದರಲ್ಲಿ ಮದುವೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಯುವತಿ ದಿಢೀರ್ ನಿರ್ಧಾರ ಬದಲಿಸಲು ಕಾರಣವೇನು ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

Leave A Reply

Your email address will not be published.