ಪುತ್ತೂರು : ಮಹಿಳೆಯೋರ್ವರಿಗೆ ಹಾವು ಕಚ್ಚಿ ಚಿಕಿತ್ಸೆ ಫಲಿಸದೇ ಸಾವು

ಪುತ್ತೂರು: ಮಹಿಳೆಯೋರ್ವರಿಗೆ ಹಾವು ಕಚ್ಚಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಕೆದಿಲದ ಕುಕ್ಕಾಜೆಯಲ್ಲಿ ನಡೆದಿದೆ.

ಮೃತರನ್ನು ಕುಕ್ಕಾಜೆ ನಿವಾಸಿ ಕೆ.ಗಿರಿಯಪ್ಪ ಪೂಜಾರಿ ಪತ್ನಿ ವಾರಿಜ (50) ಎಂದು ಗುರುತಿಸಲಾಗಿದೆ.

ಮೃತರು ಬೀಡಿ ಕಟ್ಟಿ ಮನೆಗೆಲಸಮಾಡಿಕೊಂಡು ಇರುತ್ತಿದ್ದು, ನಿನ್ನೆ ಮನೆಯ ಹಿಂಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಅಡುಗೆ ಮಾಡುವ ಶೆಡ್‌ಗೆ ಹೋಗಿದ್ದಾರೆ. ಬಳಿಕ ಯಾವುದೋ ಕಾರಣಕ್ಕೆ ಅಲ್ಲೇ ಇದ್ದ ತೆಂಗಿನ ಸಿಪ್ಪೆ ತುಂಬಿಸಿಟ್ಟಿದ್ದ ಗೋಣಿಚೀಲಕ್ಕೆ ಕೈ ಹಾಕಿದ್ದರು.

ಈ ವೇಳೆ ವಾರಿಜರವರ ಎಡ ಕೈಯ ಅಂಗೈಯ ಹೆಬ್ಬೆರಳಿನ ಹತ್ತಿರ ಯಾವುದೋ ಹಾವು ಕಚ್ಚಿದ್ದಂತಹ ಅನುಭವವಾಗಿದೆ. ಹೀಗಾಗಿ ಜೋರಾಗಿ ಕಿರುಚಾಡಿದಾಗ ಗಂಡ ಓಡಿಕೊಂಡು ಬಂದು ನೋಡಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಕೂಡಲೇ ಅವರನ್ನು ಪುತ್ತೂರಿನ ನಾಟಿ ವೈದ್ಯರಾದ ಐತಾಳರಲ್ಲಿಗೆ ಒಂದು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಲಾಗಿದೆ.

ಆದರೆ ಅಲ್ಲಿ ವೈದ್ಯರು ಇಲ್ಲದೇ ಇದ್ದುದರಿಂದ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ವೇಳೆಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave A Reply

Your email address will not be published.