ಪ್ರಿಯತಮನನ್ನು ಸೇರಲು ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿದ ಪ್ರಿಯತಮೆ | ಕೊನೆಗೆ ಏನಾಯ್ತು?

ಇದಪ್ಪಾ ನಿಜವಾದ ಪ್ರೀತಿ ಎಂದರೆ. ಮನಸ್ಸಿನಿಂದ ಯಾವುದೇ ಕಲ್ಮಶವಿಲ್ಲದೆ ಯಾರು ಪ್ರೀತಿಸುತ್ತಾರೋ ಅಂಥವರು ಮಾತ್ರ ಈ ರೀತಿಯಾಗಿ ಮಾಡುತ್ತಾರೆ. ಆತ/ಆಕೆಯನ್ನು ಪಡೆಯಬೇಕೆನ್ನುವ ಹುಚ್ಚು ಆಸೆ ಅಲ್ಲ‌ ಇದು, ಇದು ಮನಸ್ಸುಗಳ ಪ್ರೀತಿಯ ಪರಿತಾಪದ ವೇದನೆ.

ತಾನು ಪ್ರೀತಿಸಿದವರನ್ನು ಪಡೆಯಲು ಜನರು ಏನೆಲ್ಲ ಮಾಡುತ್ತಾರೆ ಎಂಬುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆಯಾಗಿದೆ. ಯುವತಿಯೋರ್ವಳು ಪ್ರೀತಿಸಿದವನನ್ನು ಮದುವೆಯಾಗಲೂ ಬಾಂಗ್ಲಾದಿಂದ ಭಾರತದವರೆಗೆ ನದಿಯಲ್ಲಿ ಈಜಿಕೊಂಡು ಬಂದಿದ್ದಾರೆ.

ಈ ಪ್ರೇಮಿಗಳ ಭೇಟಿ ಸಾಮಾಜಿಕ ಜಾಲತಾಣದಲ್ಲಿ ಆಗಿದ್ದೇ ಆದರೂ, ಇವರಿಬ್ಬರ ಮಧ್ಯೆ ದೇಶ ದೇಶಗಳ ದೂರ ಇದ್ದರೂ ಪ್ರೀತಿ ಮಾತ್ರ ಹತ್ತಿರದಲ್ಲೇ ಇತ್ತು. ಹಾಗಾಗಿ ಈ ದುಸ್ಸಾಹಸಕ್ಕೆ ಇಳಿದಿದ್ದಾಳೆ. ನಂತರ ಈಕೆಯ ಪಾಡು ಏನಾಯ್ತು ಗೊತ್ತೇ ? ಇಲ್ಲಿದೆ ಕಂಪ್ಲೀಟ್ ವಿವರ.

ಬಾಂಗ್ಲಾದೇಶ ಕೃಷ್ಣಮಂಡಲ್ (22) ಎಂಬ ಯುವತಿಯೋರ್ವಳು ಭಾರತದಲ್ಲಿರುವ ತನ್ನ ಗೆಳೆಯನಾದ ಅಭಿಕ್ ಮಂಡಲ್ ಎಂಬ ಯುವಕನನ್ನು ಮದುವೆಯಾಗಲು ಗಡಿಯಾಚೆ ಈಜಿದ್ದಾಳೆ. ಆಶ್ಚರ್ಯ ಆದ್ರೂ ಇದು ಸತ್ಯ. ಈ ಯುವತಿ ಬಾಂಗ್ಲಾದೇಶದಿಂದ ಭಾರತದವರೆಗೆ ಬರಲು ಒಂದು ಗಂಟೆಗಳ ಕಾಲ ಈಜಿ ದಡ ಸೇರಿದ್ದಾಳೆ. ಕೃಷ್ಣ ಅವರ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದ್ದಾಳೆ.

ಪೊಲೀಸ್ ಮೂಲಗಳ ಪ್ರಕಾರ, ಕೃಷ್ಣ ಮೊದಲು ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಸುಂದರಬನ್ಸ್ ಪ್ರವೇಶಿಸಿ, ನಂತರ ತನ್ನ ಇನಿಯನ ಊರನ್ನು ತಲುಪಲು ನದಿಯಲ್ಲಿ ಸುಮಾರು ಒಂದು ಗಂಟೆ ಈಜಿದ್ದಾಳೆ ಎನ್ನಲಾಗುತ್ತಿದೆ.

ಇದಾದ ಮೂರು ದಿನಗಳ ನಂತರ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣ ಅಭಿಕ್ ನನ್ನು ವಿವಾಹವಾಗಿದ್ದಾರೆ. ಆದರೆ, ಅಕ್ರಮವಾಗಿ ದೇಶ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಸೋಮವಾರ ಬಂಧಿಸಲಾಯಿತು. ಕೃಷ್ಣ ಅವರನ್ನು ಬಾಂಗ್ಲಾದೇಶ ಹೈಕಮೀಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಏನೇ ಆಗಲಿ ಈಕೆ ಪ್ರೀತಿಗೆ ಹೊಸ ಭಾಷ್ಯ ಬರೆದಾಕೆ ಅಂತಾನೇ ಹೇಳಬಹುದು. ಈಕೆಯ ಈ ಧೈರ್ಯಕ್ಕೆ ಮೆಚ್ಚಲೇ ಬೇಕು. ಪ್ರಕ್ಷುಬ್ಧ ಸಮುದ್ರದಲ್ಲೇ ಸೆರಗು ಕಟ್ಟಿ ಈಜಾಡಿ ತನ್ನ ಪ್ರಿಯತಮನನ್ನು ಭೇಟಿ ಆದ ಈಕೆ ಜೀವನದ ಯಾವುದೇ ಹಂತದಲ್ಲಿ ಆತನ ಕೈ ಬಿಡುವುದಿಲ್ಲ ಎಂದು ಅರ್ಥ. ಅಷ್ಟು ಮಾತ್ರವಲ್ಲ ಯಾವುದೇ ಕಷ್ಟದ ಸಂದರ್ಭದಲ್ಲಿ ಕೂಡಾ ಛಲಗಾತಿಯಂತೆ ಮೆಟ್ಟಿ ನಿಲ್ಲಬಹುದು. ಈಕೆಯ ಈ ಪ್ರೀತಿ, ಛಲ ಉಳಿದ ಪ್ರೇಮಿಗಳಿಗೆ ಉದಾಹರಣೆಯಾಗಲಿ.

Leave A Reply

Your email address will not be published.