ಮರ್ಯಾದ ಹತ್ಯೆಗೆ ಯುವತಿ ಬಲಿ!! ಅನ್ಯಧರ್ಮದವನ ಪ್ರೀತಿಸಿದ ಆಕೆಯನ್ನು ಕತ್ತು ಸೀಳಿ ಕೊಂದ ಪೋಷಕರ ಬಂಧನ

ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯೊಬ್ಬಳನ್ನು ಆಕೆಯ ಹೆತ್ತವರೇ ಕತ್ತು ಸೀಳಿ ಕೊಲೆ ನಡೆಸಿದ ಘಟನೆಯೊಂದು ತೆಲಂಗಾಣ ರಾಜ್ಯದಲ್ಲಿ ನಡೆದಿದ್ದು, ಮರ್ಯಾದ ಹತ್ಯೆಗೆ ಇಡೀ ಗ್ರಾಮವೇ ಬೆಚ್ಚಿ ಬೀಳುವುದರೊಂದಿಗೆ ಮಕ್ಕಳಿಗೆ ಸಲುಗೆ ಕೊಡುವ ಪೋಷಕರಿಗೆ ಈ ಘಟನೆ ಬುದ್ಧಿ ಕಲಿಸುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ರಾಜ್ಯದ ಆದಿಲಾಬಾದ್ ಜಿಲ್ಲೆಯ ಗ್ರಾಮವೊಂದರ ನಿವಾಸಿಗಳಾದ ದೇವಿಲಾಲ್ ಮತ್ತು ಸಾವಿತ್ರಿ ಬಾಯಿ ದಂಪತಿಗಳೇ ಕೃತ್ಯ ಎಸಗಿದ ಆರೋಪಿಗಳೆಂದು ಗುರುತಿಸಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ದಂಪತಿಗಳ ಪುತ್ರಿ ರಾಜೇಶ್ವರಿ ಎಂಬಾಕೆ ಅದೇ ಗ್ರಾಮದ ಶೇಕ್ ಆಲಿಂ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಈ ವಿಚಾರ ಯುವತಿಯ ಒಂದಿಬ್ಬರು ಗೆಳೆತಿಯರಿಗೆ ಹೊರತು ಇನ್ಯಾರಿಗೂ ತಿಳಿದಿರಲಿಲ್ಲ. ಆದರೆ ಎರಡು ತಿಂಗಳ ಹಿಂದೆ ಜೋಡಿಯು ಮನೆ ಬಿಟ್ಟು ಓಡಿ ಹೋಗಿದ್ದು, ಗಾಬರಿಗೊಂಡ ಯುವತಿಯ ಪೋಷಕರು ಪೊಲೀಸರಿಗೆ ಯುವತಿ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೋಡಿಯನ್ನು ಮಹಾರಾಷ್ಟ್ರದಲ್ಲಿ ಪತ್ತೆ ಹಚ್ಚಿ ಮರಳಿ ಪೋಷಕರಿಗೆ ಒಪ್ಪಿಸಿದ್ದರು. ಇದಾದ ಬಳಿಕ ಅನ್ಯ ಧರ್ಮದ ಯುವಕನನ್ನು ಪ್ರೀತಿಸಿದಲ್ಲದೇ, ಆತನೊಂದಿಗೆ ಓಡಿ ಹೋದ ಬಗ್ಗೆ ಕೋಪಗೊಂಡ ಹೆತ್ತವರು ಯುವತಿಯನ್ನು ಮನೆಯಲ್ಲಿ ಕೂಡಿ ಹಾಕಿ ಕತ್ತು ಸೀಳಿ ಕೊಲೆ ನಡೆಸಿದ್ದರು. ಕೊಲೆಯ ಸುದ್ದಿ ಹರಿದಾಡುತ್ತಿದ್ದಂತೆ ಪೊಲೀಸರು ಕೃತ್ಯ ಎಸಗಿದ ಯುವತಿಯ ಪೋಷಕರನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.