ಮನೆ ಮಾಲೀಕರು ನಿದ್ರೆಯಲ್ಲಿರುವಾಗ ತೆಂಗಿನಮರ ಏರಿ ಬಾಲ್ಕನಿಗೆ ನುಗ್ಗಿದ ಮಂಗಳೂರಿನ ಚಾಲಾಕಿ ಕಳ್ಳ ಮಾಡಿದ್ದೇನು ಗೊತ್ತಾ?

ಅಪಾರ್ಟ್‌ಮೆಂಟ್‌ನ ಬಾಲ್ಕನಿ ಪಕ್ಕ ಇರುವ ತೆಂಗಿನ ಮರ ಏರಿದ ಕಳ್ಳನೊಬ್ಬ ಮನೆಮಂದಿ ನಿದ್ರೆಯಲ್ಲಿರುವಾಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಘಟನೆಯೊಂದು ನಡೆದಿತ್ತು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಮಾಡಿದ್ದು, ಕಳ್ಳತನವಾದ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖದೀಮನನ್ನು ಬೆಂಗಳೂರಿನ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೊಹಮ್ಮದ್ ಸಾಧಿಕ್ ಮೂಲತಃ ಮಂಗಳೂರಿನ ಕಂಕನಾಡಿ ನಿವಾಸಿಯಾಗಿದ್ದು, 18 ಲಕ್ಷ ಮೌಲ್ಯದ 331 ಗ್ರಾಂ ಚಿನ್ನಾಭರಣ, 2.600 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ.

ಮೇ 27ರ ರಾತ್ರಿ ಗಂಡ-ಹೆಂಡತಿ ಹಾಗೂ ಪುಟ್ಟ ಮಗು ಮೂವರು ಬೇರೆ ಬೇರೆ ರೂಮ್‌ನಲ್ಲಿ ಮಲಗಿದ್ದರು. ಮಧ್ಯರಾತ್ರಿ ಬಂದ ಕಳ್ಳ ಮನೆ ಮಂದಿ ಎಲ್ಲಾ ಮಲಗಿರುವಾಗಲೇ ಮೊಬೈಲ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಾಲ್ಕನಿ ತೆರೆದಿದ್ದರಿಂದ ಮನೆಯೊಳಗೆ ಸುಲಭವಾಗಿ ಹೊಕ್ಕಿದ್ದಾನೆ.

ಮೊಹಮ್ಮದ್ ಸಾಧಿಕ್ ಬೆಂಗಳೂರಿನ ಸಿಟಿ ಮಾರ್ಕೆಟ್‌ನ ಹೋಟೆಲೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಈತ ಈ ಹಿಂದೆ ಕೂಡ ಬೆಂಗಳೂರಿನ ಹಲವೆಡೆ ಕಳ್ಳತನ ಮಾಡಿ ಜೈಲು ಸೇರಿ ಬಂದಿದ್ದ. ಮತ್ತೆ ಹಳೆ ಚಾಳಿ ಮುಂದುವರೆಸಿ ಬಸವನಗುಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

Leave A Reply

Your email address will not be published.