ಸುಳ್ಯ: ಸಚಿವರ ಕ್ಷೇತ್ರದ ಐವರ್ನಾಡು ಗ್ರಾಮದ ರಸ್ತೆಯೊಂದರ ಅವ್ಯವಸ್ಥೆ!! ಹನ್ನೆರಡು ವರ್ಷಗಳಿಂದ ಕಂಡಿಲ್ಲ ಡಾಂಬರು-ಮನವಿಗಿಲ್ಲ ಸ್ಪಂದನೆ

ಸುಳ್ಯ: ಕಳೆದ ಸುಮಾರು 12 ವರ್ಷಗಳಿಂದ ಉತ್ತಮೋತ್ತಮ ಜನಪ್ರತಿನಿಧಿಗಳನ್ನು ಆರಿಸಿ,ಅಧಿಕಾರಕ್ಕೇರಿಸಿ ತಮ್ಮೂರಿನ ರಸ್ತೆಯ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಬಕಪಕ್ಷಿಯಂತೆ ಕಾಯುತ್ತಿರುವ ತಾಲೂಕಿನ ಈ ಒಂದು ಗ್ರಾಮ ಇಂದಿಗೂ ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆಯಿಂದ ತೀರಾ ಇಕ್ಕಟ್ಟಿಗೆ ಸಿಲುಕಿದ್ದು,ಮುಂದಿನ ಬಾರಿಯಾದರೂ ಸಮಸ್ಯೆ ಕೊನೆಯಾಗಬಹುದುದೆಂದು ಕಾದದ್ದೇ ಶಾಪದಂತೆ ಕಾಡಿರುವುದು ವಿಷಾದನೀಯ.

ಹೌದು,ಜನಮೆಚ್ಚಿದ ಬಂಗಾರದಂತಹ ಸಚಿವರನ್ನು ನೀಡಿದ ಬಿಜೆಪಿ ಭದ್ರಕೋಟೆಯಾದ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ರಸ್ತೆಯೊಂದರ ಶೋಚನಿಯ ಸ್ಥಿತಿಯಿಂದ ಇಡೀ ಗ್ರಾಮವೇ ಕಂಗೆಟ್ಟಿದೆ.ತಾಲೂಕಿನ ಐವರ್ನಾಡು ಗ್ರಾಮದ ಜಬಳೆ, ನಿಡುಬೆ, ಕುದುಂಬು ಕುತ್ತಿ, ಪರ್ಲಿಕಜೆ ಮುಂತಾದ ಸ್ಥಳಗಳನ್ನು ಸಂಧಿಸುವ ರಸ್ತೆ ಇದಾಗಿದ್ದು, ಕಳೆದ ಹನ್ನೆರಡು ವರ್ಷಗಳಿಂದ ಡಾಂಬರು ಕಾಣದೆ ಮರುಗುತ್ತಿದೆ.

ರಸ್ತೆಯ ಅವ್ಯವಸ್ಥೆ – ನಡೆದಾಡಲು ನಾಗರಿಕರ ಪರದಾಟ

ಜಬಳೆ ಮಾರ್ಗವಾಗಿ ಪುತ್ತೂರಿಗೆ ,ಇತ್ತ ಜಾಲ್ಸೂರು ಸಂಧಿಸುವ ಏಕೈಕ ರಸ್ತೆ ಇದಾಗಿದ್ದು, ರಸ್ತೆಯ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ಸುತ್ತುಬಳಸಿ ಪ್ರಯಾಣಿಸುವಂತಾಗಿರುವುದು ವಾಸ್ತವ ಸತ್ಯ. ಸುಮಾರು 350-400 ಮನೆಗಳಿರುವ ಈ ವ್ಯಾಪ್ತಿಯಲ್ಲಿ 700 ಕ್ಕೂ ಹೆಚ್ಚು ಮತದಾರರಿದ್ದು ಪ್ರತಿಯೊಂದು ಮತ ಪಡೆದು ಕುರ್ಚಿ ಏರಿರುವ ವಾರ್ಡ್ ಸದಸ್ಯರಾಗಲಿ,ತಾಲೂಕು ಪಂಚಾಯತ್ ಸದಸ್ಯರಾಗಲಿ,ಸುಳ್ಯ ಮೆಚ್ಚಿದ ಸಚಿವರಾಗಲಿ ಇತ್ತ ಕಡೆ ಗಮನಹರಿಸದಿರುವುದು ಅತ್ಯಂತ ಬೇಸರದ/ನಾಚಿಕೆಯ ಸಂಗತಿಯಾಗಿದೆ.

ಪ್ರತೀ ದಿನ ನೂರಾರು ವಿದ್ಯಾರ್ಥಿಗಳು ಈ ಗ್ರಾಮದಿಂದ ಪೇಟೆ-ಪಟ್ಟಣಗಳ ಶಾಲಾ-ಕಾಲೇಜುಗಳಿಗೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದು, ಹದಗೆಟ್ಟ ರಸ್ತೆಯಿಂದಾಗಿ ಅತ್ತ ಕಡೆಗೆ ಬಾಡಿಗೆ ವಾಹನಗಳು ತಲೆ ಎತ್ತಿಯೂ ನೋಡುವುದಿಲ್ಲ ಎನ್ನುವ ಕೂಗೂ ಕೇಳಿಬಂದಿದೆ.ಸದ್ಯ ತಮ್ಮೂರಿನ ಹದಗೆಟ್ಟ ರಸ್ತೆಯ ಬಗ್ಗೆ ಸಂಬಂಧಪಟ್ಟವರ ಗಮನಹರಿಸಲು ಅಲೆದೂ-ಅಲೆದೂ ಚಪ್ಪಲಿ ಸವೆಸಿಕೊಂಡಿರುವ ಗ್ರಾಮಸ್ಥರು ಈ ಬಾರಿ ಒಂದು ದಿಟ್ಟ ನಿರ್ಧಾರಕ್ಕೆ ಬಂದಿದ್ದು,ಕೂಡಲೇ ರಸ್ತೆ ಸರಿಪಡಿಸಲು ಅನುದಾನ ಮಂಜೂರು ಮಾಡಬೇಕು,ಈ ಮೊದಲೇ ಮಾಡಿದ್ದಲ್ಲಿ ಕಾರ್ಯರೂಪಕ್ಕೆ ತರಬೇಕು ತಪ್ಪಿದಲ್ಲಿ ಪ್ರತಿಭಟನೆಯ ಜೊತೆಗೆ ಮತದಾನ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಲಾಗಿದೆ.

ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಭಾಗದ ರಸ್ತೆ ಸಮಸ್ಯೆಯನ್ನು ಬಗೆಹರಿಸುವಲ್ಲಿ, ಹನ್ನೆರಡು ವರ್ಷಗಳಿಂದ ಇಲ್ಲಿ ವರೆಗೆ ಬಂದಿರುವ ಮನವಿಗಳಿಗೆ ಸ್ಪಂದಿಸಬೇಕು ಎನ್ನುವ ಆಗ್ರಹವೂ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

Leave A Reply

Your email address will not be published.