‘ ಹುಲಿನ ಬೋನಲ್ಲಿ ಹಾಕಿಟ್ಟಿದೆ ಎಂದು ಅದು ಹುಲ್ಲು ತಿನ್ನಲ್ಲ ‘ BJP ಗೆ ನೇರ ಟಾಂಗ್ ನೀಡಿದ ಯಡಿಯೂರಪ್ಪ ಪುತ್ರ ವಿಜಯೇಂದ್ರ | ಪರಿಷತ್ ಟಿಕೆಟ್ ತಪ್ಪಿಸಿದ ಕಾರಣಕ್ಕೆ ಕೆರಳಿ ನಿಂತ ಹುಲಿ ಮರಿ

ರಾಜಕೀಯದಲ್ಲಿ ಯಾರೂ ಅಧಿಕಾರ ಬೇಡವೆಂದು ಕೈಕಟ್ಟಿ ಕೂರುವುದಿಲ್ಲ. ಎಲ್ಲರೂ ಕೂಡ ಟಿಕೆಟ್ ಆಕಾಂಕ್ಷಿಗಳೇ. ಇದೀಗ ವಿಧಾನಸಭೆ ಚುನಾವಣೆಯತ್ತ ರಾಜ್ಯ ದಾಪುಗಾಲಿಡುತ್ತಿರುವಾಗಲೇ ರಾಜಕೀಯ ಪ್ರಹಸನಗಳು, ಆರೋಪ-ಪ್ರತ್ಯಾರೋಪಗಳು, ಪರೋಕ್ಷ ಎಚ್ಚರಿಕೆಗಳು, ಅಸಮಾಧಾನ, ಬೇಗುದಿ ಒಂದೊಂದಾಗಿ ಉಕ್ಕಿ ಹರಿಯಲಾರಂಭಿಸಿವೆ. ಇದೀಗ ಟಿಕೆಟ್ ಕೈತಪ್ಪಿರುವ ಬಿ.ವೈ. ವಿಜಯೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳು ಅವರ ಅಸಮಾಧಾನವನ್ನು ಹೊರಹಾಕಿದೆ. ಪರೋಕ್ಷವಾಗಿ ಬಿಜೆಪಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಬಿಎಸ್ ವೈ ವಿರುದ್ಧದ ಷಡ್ಯಂತ್ರಗಳಿಗೆ ಹೆದರೋದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಹಾದಿ ತುಂಬ ಜನರು ಕಲ್ಲೇಸೆದರು. ಆದರೆ ಯಡಿಯೂರಪ್ಪನವರು ಆ ಕಲ್ಲುಗಳನ್ನೇ ಹಾದಿ ಮಾಡಿಕೊಂಡು ಬೆಳೆದು ಬಂದರು. ಹುಲಿ ಯನ್ನು ಬೋನಿನಲ್ಲಿ ಕೂಡಿ ಹಾಕಿಟ್ಟರೂ ಅದು ಹೊಟ್ಟೆ ಹಸಿದಿದೆ ಎಂದು ಹುಲ್ಲು ತಿನ್ನುವುದಿಲ್ಲ…ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

ಹೊಳೆನರಸೀಪುರದಲ್ಲಿ ಶನಿವಾರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಹುಲಿ ಎಂದಿಗೂ ಹುಲಿಯೇ. ಅದು ಬೇಟೆ ಆಡುವುದನ್ನು ಬಿಡುವುದಿಲ್ಲ’ ಎಂದಿರುವುದು ಕುತೂಹಲ ಕೆರಳಿಸಿದೆ.
ನಮ್ಮ ವೀರಶೈವ-ಲಿಂಗಾಯತರು ಎಂದೆಂದಿಗೂ ಹುಲಿಗಳೇ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ ಎಂದ ಅವರು, ಕೊನೆಗೆ ಈ ಸಮಾರಂಭದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ ಎಂದು ಹೇಳಿ ಸುಮ್ಮನಾದರು.

12ನೇ ಶತಮಾನದಲ್ಲಿ ಎಲ್ಲ ಶೋಷಿತ ವರ್ಗದವರಿಗೂ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಿದ ಗುರು ಬಸವಣ್ಣ. ಅದೇ ರೀತಿ ಯಡಿಯೂರಪ್ಪ ರಾಜ್ಯದ ಶೋಷಿತ ವರ್ಗಗಳು, ಮಹಿಳೆಯರಿಗೆ ಸಹಾಯ ಹಸ್ತ ಚಾಚಿ ಸಮಾಜದ ಮುಖ್ಯ ವಾಹಿನಿಗೆ ತಂದ ಧೀಮಂತ ನಾಯಕ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ಬಸವಣ್ಣ ಅವರ ಆದರ್ಶಗಳು ಮೋದಿ ಅವರಿಗೂ ಪ್ರೇರಣೆಯಾಗಿವೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ನಾಡಿನ ಏಳಿಗೆಗೆ ಕಾರಣರಾದವರು. ನಾನು ಅವರ ಪುತ್ರನಾಗಿರುವುದಕ್ಕೆ ಹೆಮ್ಮೆ ಇದೆ. ಸಮಾಜದ ಮುಖಂಡರು ನನ್ನನ್ನು ಆಹ್ವಾನಿಸಿದ್ದರಿಂದಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬರುವ ದಾರಿಯಲ್ಲಿ ಗ್ರಾಮೀಣ ಪ್ರದೇಶದ ಜನರು ನನ್ನನ್ನು ‘ನಮ್ಮ ಯಡಿಯೂರಪ್ಪ ಅವರ ಪುತ್ರ’ ಎನ್ನುತ್ತ ಸ್ವಾಗತಿಸಿದರು. ಇದಕ್ಕಿಂತ ಬೇರೇನು ಬೇಕು ಎಂದೂ ವಿಜಯೇಂದ್ರ ಹೇಳಿದರು.

ಚರ್ಚೆಗೆ ಗ್ರಾಸವಾದ ಮಾತು

ಇತ್ತೀಚೆಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಅಂತಿಮ ಕ್ಷಣದಲ್ಲಿ ಟಿಕೆಟ್‌ ಕೈ ತಪ್ಪಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ವಿಜಯೇಂದ್ರ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಅವರಾಡಿದ ಮಾತುಗಳ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಅದಲ್ಲದೆ ಯಡಿಯೂರಪ್ಪ ಇದನ್ನು ನಿರ್ಲಕ್ಷಿಸಿದರೇ ಅಥವಾ ತಮಗೆ ಸ್ಥಾನಮಾನಗಳನ್ನು ನೀಡೋದ್ರಲ್ಲಿ ಗಮನ ಹರಿಸದಿದ್ದರೇ ಮತ್ತೊಮ್ಮೆ ಬಂಡಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆಯೇ ಎಂಬ ಮಾತು ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಿಂದಲೇ ಕೇಳಿಬಂದಿದೆ.

Leave A Reply

Your email address will not be published.