ಮುಸ್ಲಿಂ ಹೆಸರಿನ ಸಂಘಟನೆಗಳು ಮಾಡುವ ಅನಾಹುತಗಳಿಗೆ ಸಮುದಾಯ ಜವಾಬ್ದಾರರಲ್ಲ- ಜಿಫ್ರಿ ತಂಙಳ್

ಮಂಗಳೂರು: ಯುದ್ಧ ಮತ್ತು ಸಂಘರ್ಷವು ಇಸ್ಲಾಮಿನ ಸಿದ್ಧಾಂತವಲ್ಲ. ಧಾರ್ಮಿಕ ನಂಬಿಕೆಯೂ ಅಲ್ಲ. ಅದನ್ನು ಯಾವೊಬ್ಬ ಮುಸ್ಲಿಮನೂ ಅಂಗೀಕರಿಸುವುದಿಲ್ಲ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಜಳ್ ಹೇಳಿದರು.

ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಸಮಿತಿಯ ವತಿಯಿಂದ ‘ಸಹಬಾಳ್ವೆ ಮರಳಿ ಪಡೆಯಲು’ ಎಂಬ ಘೋಷವಾಕ್ಯ ದೊಂದಿಗೆ ನಗರದ ಪುರಭವನದಲ್ಲಿ ಗುರುವಾರ ನಡೆದ ಸೌಹಾರ್ದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುರಾನಿನ ಅಧ್ಯಾಯಗಳನ್ನು ದುರ್ವ್ಯಾಖ್ಯಾನಗೊಳಿಸಿ ಇಸ್ಲಾಮನ್ನು ಕೋಮುವಾದಿಗಳ ಮತ್ತು ಭಯೋತ್ಪಾದಕರ ಧರ್ಮವನ್ನಾಗಿ ಬಿಂಬಿಸಲಾಗುತ್ತಿದೆ. ಧಾರ್ಮಿಕ ಅರಿವಿನ ಕೊರತೆಯೇ ಕೋಮುವಾದಕ್ಕೆ ಮೂಲ ಕಾರಣವಾಗಿದೆ. ದೇಶದ ಅಭಿವೃದ್ಧಿ ಹಾಗೂ ಏಕತೆಗೆ ಕೋಮುವಾದವು ಬಹಳ ಅಪಾಯಕಾರಿ ಎಂಬುದನ್ನು ಪ್ರತಿಯೊಬ್ಬ ಮುಸಲ್ಮಾನನೂ ತಿಳಿದುಕೊಂಡಿದ್ದಾನೆ. ಕೆಲವೊಂದು ನಾಮಧಾರಿಗಳು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಕೋಮುವಾದವನ್ನು ಬಳಸಿದರೆ ಅದಕ್ಕೆ ಧರ್ಮದ ಸಿದ್ಧಾಂತ ಅಥವಾ ಧಾರ್ಮಿಕ ಗುರುಗಳು ಜವಾಬ್ದಾರರಲ್ಲ. ಆ ಸಂದೇಶವನ್ನು ಒಕ್ಕೊರಲಿನಿಂದ ಸಾರುವುದಕ್ಕಾಗಿ ಸರ್ವ ಧರ್ಮೀಯ ಗುರುಗಳು ಇಂದಿಲ್ಲಿ ಒಗ್ಗಟ್ಟಾಗಿ ಸೇರಿದ್ದೇವೆ ಎಂದು ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಜಳ್ ಹೇಳಿದರು.

ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪಕ್ಕೆ ಆಧಾರವಿಲ್ಲ. ಭಾರತಕ್ಕೆ ಇಸ್ಲಾಮ್ ಧರ್ಮ ಆಗಮಿಸಿದ ಸಂದರ್ಭದಲೇ ಇಲ್ಲಿನ ಶಿಲ್ಪಿಗಳು ದೇವಾಲಯಗಳ ವಾಸ್ತುಶೈಲಿಯಲ್ಲೇ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನೀಗ ಕೆಲವರು ದೇವಸ್ಥಾನವೆಂದು ವಾದಿಸುವುದು ಖಂಡನೀಯ. ವೈವಿದ್ಯತೆಯಲ್ಲಿ ಏಕತೆ ಮತ್ತು ಧಾರ್ಮಿಕ ಸಾಮರಸ್ಯದಿಂದಲೇ ಭಾರತದ ಅಸ್ತಿತ್ವ ಅಡಗಿದೆ. ಭಾರತ-ಪಾಕ್ ಯುದ್ಧ ನಡೆದಾಗ ಭಾರತೀಯ ಮುಸ್ಲಿಮರು ಭಾರತದ ಜೊತೆ ನಿಂತಿದ್ದಾರೆ. ಭವಿಷ್ಯದಲ್ಲೂ ಭಾರತದ ಜೊತೆ ನಿಲ್ಲಲಿದ್ದಾರೆ. ಅದರಲ್ಲಿ ಯಾವುದೇ ಸಂಶಯಬೇಡ. ವಾಸಿಸುವ ನೆಲದ ಸಂಸ್ಕೃತಿಯನ್ನು ಗೌರವಿಸುವುದು ಹಾಗೂ ಪ್ರಜಾಸತ್ತಾತ್ಮಕ ನಿಯಮಗಳನ್ನು ಪಾಲಿಸುವುದು ಧಾರ್ಮಿಕ ಕರ್ತವ್ಯವಾಗಿದೆ ಎಂದು ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಜಲ್ ತಿಳಿಸಿದರು.

Leave A Reply

Your email address will not be published.