ಸ್ಕೂಲ್ ಬಸ್ – ಬೈಕ್ ಆ್ಯಕ್ಸಿಡೆಂಟ್ | ಕಾಲೇಜು ದಾಖಲಾತಿಗೆಂದು ಹೋದ ಬಾಲಕಿ ಅಪಘಾತದಲ್ಲಿ ದಾರುಣ ಸಾವು !

ಎಸ್ ಎಸ್ ಎಲ್ ಸಿ ಮುಗಿಯಿತು, ಹಾಗಾಗಿ ಕಾಲೇಜು ದಾಖಲಾತಿಗೆಂದು ಬಾಲಕಿ ಬೈಕ್ ನಲ್ಲಿ ಹೋಗಿದ್ದಾಳೆ. ಆದರೆ ಆಕೆಯ ಕಾಲೇಜು ದಾಖಲಾತಿ ಆಗುವ ಮೊದಲೇ ಬಾಲಕಿ ಭೀಕರ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾಳೆ.

ಇಂದು ಗುರುವಾರ ಖಾಸಗಿ ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ನಗರದ ಬನಶಂಕರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 16 ವರ್ಷದ ಬಾಲಕಿ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಾಲಕಿ ಬೆಂಗಳೂರಿನ ಹಾರೋಹಳ್ಳಿ ನಿವಾಸಿ.

ಇತ್ತೀಚಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದ ಕೀರ್ತನ ಮತ್ತು ಹರ್ಷಿತಾ ಇಬ್ಬರೂ ಕನಕಪುರ ರಸ್ತೆಯ ನೆಟ್ಟಿಗೆರೆ ಬಳಿಯ ಅಕ್ಕನ ಮನೆಗೆ ಬುಧವಾರ ತೆರಳಿದ್ದರು. ಗುರುವಾರ ಬೆಳಗ್ಗೆ ನಾಗರಬಾವಿಯ ಸರ್ಕಾರಿ ಕಾಲೇಜಿಗೆ ಸೇರಲೆಂದು ಸ್ನೇಹಿತ ದರ್ಶನ್‌ನ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬನಶಂಕರಿಯ ಕಿತ್ತೂರು ಚೆನ್ನಮ್ಮ ಫ್ಲೈ ಓವರ್ ಬಳಿ ವೇಗವಾಗಿ ಬಂದ ಡೆಲ್ಲಿ ಪಬ್ಲಿಕ್ ಶಾಲೆಯ ವ್ಯಾನ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಹರ್ಷಿತಾ ಮತ್ತು ದರ್ಶನ್ ಗಾಯಗೊಂಡಿದ್ದಾರೆ. ಶಾಲಾ ವಾಹನ ಚಾಲಕ ಪರಾರಿಯಾಗಿದ್ದಾನೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.