ಬ್ರಹ್ಮಾವರ:ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಜೋಡಿ ಆತ್ಮಹತ್ಯೆ ಪ್ರಕರಣ!! ಮಂಗಳೂರಿನಿಂದ ಕಾರನ್ನು ಹಿಂಬಾಲಿಸಿತ್ತೇ ಅಪರಿಚಿತ ವಾಹನ!??

ಉಡುಪಿಯ ಬ್ರಹ್ಮಾವರದಲ್ಲಿ ಮೇ 22 ರ ಮುಂಜಾನೆಯ ಹೊತ್ತಿನಲ್ಲಿ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕಾರಿನಲ್ಲಿ ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿದ್ದು, ಉಡುಪಿ ಜಿಲ್ಲಾ ಪೊಲೀಸರ ತನಿಖೆ ತೀವ್ರಗೊಂಡ ಬೆನ್ನಲ್ಲೇ ಸಾವಿನ ಸುತ್ತ ಅನುಮಾನಗಳು ಎದ್ದಿದ್ದು,ಪ್ರಕರಣ ಸಂಶಯಾಸ್ಪದವಾಗಿ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

ಘಟನೆ ವಿವರ: ಬೆಂಗಳೂರಿನ ಹೆಬ್ಬಾಳ ನಿವಾಸಿಗಳಾದ ಜ್ಯೋತಿ(23)ಹಾಗೂ ಯಶವಂತ(23)ಎಂಬಿಬ್ಬರು ಪ್ರೇಮಿಗಳು ಮದುವೆಯಾಗಲು ಮನೆಯವರು ವಿರೋಧಿಸಿದರೆಂಬ ಕಾರಣಕ್ಕೆ ಬೆಂಗಳೂರಿನಿಂದ ಬೈಕಿನಲ್ಲಿ ಮಂಗಳೂರಿಗೆ ಬಂದಿದ್ದರು. ಹೀಗೆ ಬಂದ ಜೋಡಿ ಖಾಸಗಿ ಬಾಡಿಗೆ ಮನೆಯೊಂದರಲ್ಲಿ ರೂಮ್ ಬಾಡಿಗೆ ಪಡೆದುಕೊಂಡಿದ್ದು, ಎಲ್ಲೆಡೆ ಸುತ್ತಾಟ ನಡೆಸಿದ್ದರು.ಮೃತ ಯುವಕ ಮರಾಠ ಸಮುದಾಯದವನಾಗಿದ್ದು,ಯುವತಿ ಪರಿಶಿಷ್ಟ ಜಾತಿಗೆ ಸೇರಿದ್ದಳು ಎನ್ನಲಾಗಿದೆ.ಇದೇ ಕಾರಣಕ್ಕಾಗಿ ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧ ವ್ಯಕ್ತವಾಗಿತ್ತು ಎನ್ನುವ ಮಾತುಗಳೂ ಕೇಳಿ ಬಂದಿವೆ.

ಮಂಗಳೂರಿನಿಂದ ಬಾಡಿಗೆ ಕಾರೊಂದನ್ನು ಪಡೆದ ಜೋಡಿಯು ತಾವಿಬ್ಬರೂ ಗಂಡ ಹೆಂಡತಿ ಎಂದೇ ಪರಿಚಯ ಮಾಡಿಕೊಂಡಿದ್ದರು. ಬಳಿಕ ಉಡುಪಿಯತ್ತ ಪ್ರಯಾಣ ಬೆಳೆಸಿ ಮಾರನೇ ದಿನ ಸುಟ್ಟ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಮೊದಲಿಗೆ ಗುರುತು ಪತ್ತೆಯಾಗದೇ ತನಿಖೆಗೆ ಕೊಂಚ ಅಡಚಣೆ ಉಂಟಾಯಿತು. ಇಬ್ಬರ ಗುರುತು ಪತ್ತೆಯಾದ ಕೂಡಲೇ ಹೆತ್ತವರು-ಕುಟುಂಬಿಕರು ಉಡುಪಿಗೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಇಬ್ಬರ ಶವವನ್ನೂ ಇಂದ್ರಾಳಿಯ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

ಸಾವಿನ ಸುತ್ತ ಹಲವು ಅನುಮಾನ!!
ಜೋಡಿಯು ಕಾರಿನಲ್ಲಿ ಪ್ರಯಾಣಿಸುವಾಗ ಹಿಂಬದಿ ಸೀಟಿನಲ್ಲಿ ಬೇರೆ ಯಾರಾದರೂ ಇದ್ದರೇ,? ಬಾಡಿಗೆ ಮನೆ ಮಾಡಿಕೊಂಡವರು ಸಾವಿನ ನಿರ್ಧಾರ ಮಾಡಿದ್ದೇಕೆ!? ಕಾರಿನಲ್ಲಿ ಜೋಡಿಯನ್ನು ಕೂಡಿ ಹಾಕಿ ಬೆಂಕಿ ಹಚ್ಚಲಾಯಿತೇ!? ಕಾರನ್ನು ಬೇರೆ ಯಾರಾದರೂ ಹಿಂಬಾಲಿಸಿದ್ದರೇ!? ಹೀಗೆ ಹತ್ತು ಹಲವು ಪ್ರಶ್ನೆಗಳು ಸಾವಿನ ಸುತ್ತ ಎದ್ದಿದ್ದು ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.ಮದುವೆಯಾಗಿದ್ದೇವೆ ಎಂದ ಜೋಡಿಗೆ ಯಾರೂ ಊಹಿಸದ ರೀತಿಯ ಸಾವು ಬಂದೊದಗಿದ್ದು,ನವ ಜೋಡಿಯ ಸಾವು ಆತ್ಮಹತ್ಯೆಯೋ-ಕೊಲೆಯೋ ಎನ್ನುವುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

Leave A Reply

Your email address will not be published.