ಕಡಬ : ಓದು ನಿಲ್ಲಿಸಿದ 18 ವರ್ಷದ ಬಳಿಕ SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ಯುವತಿ

ಕಡಬ: ಮನಸಿದ್ದರೆ ಮಾರ್ಗ ಎಂಬ ಮಾತಿಗೆ ನಿದರ್ಶನವಾಗಿದ್ದಾರೆ ಈ ಯುವತಿ. ಹೌದು. ಬದುಕಿನಲ್ಲಿ ಛಲವೊಂದಿದ್ದರೆ ಎಂತಹ ಮಹಾಕಾರ್ಯವನ್ನು ಸಹ ಒಳ್ಳೆಯ ಮನಸ್ಸಿನಿಂದ ಗೆಲ್ಲಬಹುದು. ಬಡತನದಲ್ಲಿ ಬೆಳೆದಿದ್ದ ಯುವತಿಯೊಬ್ಬರು ಶಾಲೆ ಬಿಟ್ಟು ಬರೋಬ್ಬರಿ 18 ವರ್ಷದ ಬಳಿಕ ಎಸ್ಸೆಸೆಲ್ಸಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.

ಇವರು ಕೊಂಬಾರು ಗ್ರಾಮದ ಕಟ್ಟೆ ಎಮರಡ್ಡ ಮುದ್ದಪ್ಪ ಗೌಡ ಮತ್ತು ಜಾನಕಿ ದಂಪತಿಯ ಪುತ್ರಿ (31ವ.) ಪುಷ್ಪಾವತಿ. 2004 ರಲ್ಲಿ ಪುಷ್ಪಾವತಿ ಆರ್ಥಿಕ ಸಮಸ್ಯೆಯಿಂದ 7ನೇ ತರಗತಿಗೆ ಓದು ನಿಲ್ಲಿಸಿದ್ದರು. ಬಳಿಕ ಜೀವನ ನಡೆಸಲೆಂದು ಕೆಲಸದತ್ತ ಮುಖ ಮಾಡಿದ ಇವರು, ಉಡುಪಿಯ ಕಂಪನಿಯೊಂದರಲ್ಲಿ 6-7 ವರ್ಷ ಉದ್ಯೋಗದಲ್ಲಿದ್ದರು.

ವಿದ್ಯಾಭ್ಯಾಸದಿಂದ ವಂಚಿತರಾಗಿದ್ದ ಇವರ ಮನಸ್ಸು ಮತ್ತೆ ಓದಿನ ಕಡೆಗೆ ವಾಲಿತು. ಓದು ನಿಲ್ಲಿಸಿದ 18 ವರ್ಷದ ಬಳಿಕ ಮತ್ತೆ ಶಿಕ್ಷಣದತ್ತ ಹೆಜ್ಜೆ ಹಾಕಿದ ಇವರು, 2021-22ನೇ ಶೈಕ್ಷಣಿಕ ವರ್ಷದಲ್ಲಿ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಗೆ ಸೇರಿ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಒಂದೇ ಪ್ರಯತ್ನದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾನು ಕಲಿಯಬೇಕು, ಹೇಗಾದರೂ ಮಾಡಿ ತನ್ನ ಎಸೆಸೆಲ್ಸಿ ಪರೀಕ್ಷೆ ಪಾಸಾಗಬೇಕು ಎಂಬ ಇವರ ಛಲವೇ, ಇವರನ್ನು ಈ ಸ್ಥಾನಕ್ಕೆ ಕೊಂಡೊಯ್ದಿದೆ. ಓದು ನಿಲ್ಲಿಸಿದ 18 ವರ್ಷದ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರ ಸಾಧನೆಗೆ ಅನೇಕರ ಶುಭಹಾರೈಕೆಗಳೇ ಹರಿದುಬಂದಿದೆ.

Leave A Reply

Your email address will not be published.