ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ದುರಂತ ಸಾವು ಕಂಡ ಬೈಕ್ ಸವಾರ

ಚಾಮರಾಜನಗರ: ಬಿಳಿಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರಂತ ಸಾವು ಕಂಡಿರುವ ಘಟನೆ ತಾಲೂಕಿನ ಮಲೆಯೂರು ಗ್ರಾಮದಲ್ಲಿ ನಿನ್ನೆ ನಡೆದಿದೆ.

ಮೃತರನ್ನು ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದ ಜಗದೀಶ್(27) ಎಂದು ಗುರುತಿಸಲಾಗಿದೆ.

ಜಗದೀಶ್​ಗೆ ಚಾಮುಲ್​ನಲ್ಲಿ ನೌಕರಿ ಸಿಕ್ಕಿತ್ತು, ಹೀಗಾಗಿ ಲಾರಿ ಚಾಲನೆಗೆ ಡಿಎಲ್ ಪಡೆಯಲು ಚಾಮರಾಜನಗರಕ್ಕೆ ಬರುತ್ತಿದ್ದರು. ಈ ವೇಳೆ ಮಲೆಯೂರು ಸಮೀಪ ಬಿಳಿಕಲ್ಲು ತುಂಬಿಕೊಂಡು ತೆರಳುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಬೈಕ್ ಸವಾರನ ಮೈಮೇಲೆ ಹರಿದು ಜಗದೀಶ್ ಸ್ಥಳದಲ್ಲೇ ಅಸುನೀಗಿದ್ದಾರೆ. ದುರಂತ ಸಾವು ಕಂಡ ಮೃತ ಜಗದೀಶ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಆದರೆ, ಟ್ರ್ಯಾಕ್ಟರ್ ಡ್ರೈವರ್ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು, ತಂತಿಬೇಲಿ ಕಲ್ಲನ್ನು ಮಲೆಯೂರು ಬೆಟ್ಟದಲ್ಲಿ ತರಾತುರಿಯಿಂದ ಬಿಸಾಡಿದ್ದಾನೆ. ನಂತರ ಟ್ರ್ಯಾಕ್ಟರ್ ಗೆ ಅಂಟಿದ್ದ ರಕ್ತ ತೊಳೆದು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಈ ವೇಳೆ‌ಗಾಗಲೇ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದು, ಆಗ ಚಾಲಕ ಟ್ರ್ಯಾಕ್ಟರ್‌ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಇದರ‌ ನಡುವೆ ಅಪಘಾತ ಮಾಡಿದ ವಾಹನಕ್ಕೆ ಲೈಸೆನ್ಸ್ ಹಾಗು ದಾಖಲಾತಿ ಇಲ್ಲದಿದ್ದರು, ಆರೋಪಿ ಪರ ಪೋಲೀಸರು ಕೆಲಸ ಮಾಡುತ್ತಾ ಇದ್ದಾರೆ. ಅಕ್ರಮ ಗಣಿಗಾರಿಕೆಯ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಅಮಾಯಕನ ಸಾವಾಗಿದೆ ಕೂಡಲೇ ಅಕ್ರಮಗಣಿಗಾರಿಕೆ ಸ್ಥಗಿತಗೊಳಿಸಿ ಎಂದು ಆರೋಪಿಸಿ ನಿಟ್ರೆ ಗ್ರಾಮದ ಯುವಕರು ಪ್ರತಿಭಟನೆ ನಡೆಸಿದರು‌. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಿಯದರ್ಶಿನಿ, ಸರ್ಕಲ್ ಇನ್ಸಪೆಕ್ಟರ್ ಪುಟ್ಟಸ್ವಾಮಿ, ಪಿಎಸೈ ರಾಜೇಂದ್ರ ಭೇಟಿ ನೀಡಿದ್ದಾರೆ.

Leave A Reply

Your email address will not be published.