ಪುತ್ತೂರು ರೈಲು ಬಡಿದು ಆಲಂಕಾರಿನ ಯುವಕ ಮೃತ್ಯು

ಪುತ್ತೂರು : ಕಬಕ ಸಮೀಪದ ಮಿತ್ತೂರಿನಲ್ಲಿ ರೈಲು ಬಡಿದು ಆಲಂಕಾರು ಸಮೀಪದ ಕೊಯಿಲದ ಯುವಕ ಸಾವನ್ನಪ್ಪಿರುವ ಘಟನೆ ಮೇ 15ರಂದು ರಾತ್ರಿ ನಡೆದಿದೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ಪುಣಿಕೆತ್ತಡಿ ನಿವಾಸಿ ಜಗದೀಶ ಹಾಗೂ ಹೇಮಾವತಿ ದಂಪತಿ ಪುತ್ರ ಕಾರ್ತಿಕ್(24ವ.)ಮೃತಪಟ್ಟ ದುರ್ದೈವಿ ಯುವಕ.

ಮಿತ್ತೂರುನಲ್ಲಿ ಕಿರು ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮುಂಭಾಗದಿಂದ ಬರುತ್ತಿದ್ದ ರೈಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ಕಾರ್ತಿಕ್ ಕೆಲ ವರ್ಷದ ಹಿಂದೆ ಊರಿಗೆ ಬಂದು ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಮಂಗಳೂರಿಗೆ ಕೆಲಸಕ್ಕೆ ಬಂದಿದ್ದ ಅವರು ಮೇ 15ರಂದು ರಾತ್ರಿ ಮನೆಗೆ ಫೋನ್ ಮಾಡಿದ್ದರು. ಬಸ್ ಸಿಗದ ಹಿನ್ನೆಲೆಯಲ್ಲಿ ಮಿತ್ತೂರಿನಲ್ಲಿ ಸೇತುವೆ ಮೂಲಕ ಉಪ್ಪಿನಂಗಡಿ ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.

Leave A Reply

Your email address will not be published.