ಮೂರು ವರ್ಷಗಳ ಹಿಂದೆ ನಾಪತ್ತೆಯಾದ ನಾಟಿವೈದ್ಯ : ದುಷ್ಕರ್ಮಿಗಳಿಂದ ಹತ್ಯೆ | ತಡವಾಗಿ ಬೆಳಕಿಗೆ ಬಂದ ಪ್ರಕರಣ

ಮೈಸೂರು : ಮೂರು ವರ್ಷಗಳ ಹಿಂದೆ ಮೈಸೂರಿನಿಂದ ನಿಗೂಢವಾಗಿ ಕಣ್ಮರೆಯಾದ ನಾಟಿ ವೈದ್ಯನೋರ್ವ ದುಷ್ಕರ್ಮಿಗಳಿಂದ ಭೀಕರವಾಗಿ ಕೊಲೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದ ಮೈಸೂರಿನ ಬೋಗಾದಿ ನಿವಾಸಿ ಶಾಬಾದ್‌ ಶರೀಫ್ ಕೊಲೆಯಾದವರು. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗೆ ಹುಡುಕಾಟ ನಡೆದಿದೆ.

ಪ್ರಕರಣ ಹಿನ್ನೆಲೆ
ಮೈಸೂರಿನ ಬೋಗಾದಿ ನಿವಾಸಿಯಾದ ಶಾಬಾದ್‌ ಶರೀಫ್ ಅವರ ಪೂರ್ವಜರ ಕಾಲದಿಂದಲೂ ಪೈಲ್ಸ್ ಹಾಗೂ ಪಿಸ್ತೂಲ ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಪಾರಂಪರಿಕ ವೈದ್ಯ ಪದ್ಧತಿಯನ್ನು ಶಾಬಾದ್‌ ಶರೀಫ್ ಕೂಡ ಮುಂದುವರೆಸಿಕೊಂಡು ಹೋಗಿದ್ದು, ಇವರಿಂದ ಚಿಕಿತ್ಸೆ ಪಡೆದವರು ಗುಣಮುಖರಾಗಿದ್ದರು. ಈ ಮಾಹಿತಿ ಪಡೆದ ಕೇರಳ ರಾಜ್ಯದ ಮಲ ಪುರಂ ಜಿಲ್ಲೆಯ ನೀಲಾಂ ಬುರ್‌ ನಿವಾಸಿ ಶೈಬಿನ್‌ ಅಶ್ರಫ್ ಹಾಗೂ ಇತರರು ಸಂಚು ರೂಪಿಸಿ, ಕೇರಳದಲ್ಲಿರುವ ತಮ್ಮ ಕಡೆಯವರಿಗೆ ಪೈಲ್ಸ್ ಚಿಕಿತ್ಸೆ ನೀಡಬೇಕಿದೆ ಎಂದು ನಂಬಿಸಿ 2019ರ ಆಗಸ್ಟ್‌ ತಿಂಗಳಲ್ಲಿ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಸ್ವಲ್ಪ ದೂರ ಹೋದ ಬಳಿಕ ಕಾರಿಗೆ ಹತ್ತಿಸಿಕೊಂಡು ಪ್ರಯಾಣಿಸಿದ್ದಾರೆ. ತದನಂತರ ಶೈಬಿನ್‌ ಅಶ್ರಫ್ ನಡೆದುಕೊಂಡ ರೀತಿಯಿಂದ ತಾನು ಮೋಸ ಹೋಗಿರುವುದಾಗಿ ಮೈಸೂರಿನ ಶಾಬಾದ್‌ ಶರೀಫ್ ಗೆ ಗೊತ್ತಾಗಿದೆ. ಆದರೆ, ಅವರಿಂದ ತಪ್ಪಿಸಿ ಕೊಳ್ಳಲು ಸಾಧ್ಯವಾಗಿಲ್ಲ. ಶರೀಫ್ ತಪ್ಪಿಸಿಕೊಳ್ಳದಂತೆ ಸರಪಳಿ ಬಿಗಿದು ಸುಮಾರು ಒಂದು ವರ್ಷಗಳ ಕಾಲ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪೈಲ್ಸ್‌ಗೆ ನೀಡುವ ಚಿಕಿತ್ಸಾ ವಿಧಾನ ಹಾಗೂ ಔಷಧಿಯ ಬಗ್ಗೆ ಮಾಹಿತಿ ಕೇಳಿ ಚಿತ್ರಹಿಂಸೆ ನೀಡಿದ್ದಾರೆ.

ದುಷ್ಕರ್ಮಿಗಳ ಕಿರುಕುಳಕ್ಕೆ ಬಗ್ಗದ ಶರೀಫ್ ಕೊನೆಯವರೆಗೂ ಔಷಧಿ ಬಗ್ಗೆ ಬಾಯಿ ಬಿಟ್ಟಿಲ್ಲ. ಇದರಿಂದ ಬೇಸತ್ತ ದುಷ್ಕರ್ಮಿಗಳು ಶರೀಫ್ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್‌ ಕವರಿನಲ್ಲಿ ಹಾಕಿ ನದಿಗೆ ಬಿಸಾಡಿದ್ದಾರೆ. ಇದಾದ ಬಳಿಕ ನೀಲಾಂಬುರ್‌ ನಿವಾಸಿ ಶೈಬಿನ್‌ ಅಶ್ರಫ್ ಮನೆಯಲ್ಲಿ ದರೋಡೆ ನಡೆದಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿರುವ ಹೊತ್ತಿನಲ್ಲಿ ಕೇರಳದ ಸಚಿವಾಲಯದ ಮುಂದೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ಕೆಲವರು ಪ್ರತಿಭಟನೆಗೆ ಇಳಿದಿದ್ದಾರೆ. ಮಾತ್ರವಲ್ಲ, ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರಿಗೆ ಒಬ್ಬನ ಬಳಿ ಇದ್ದ ಪೆನ್‌ ಡ್ರೈವ್‌ ಮೇಲೆ ಕುತೂಹಲ ಮೂಡಿ, ಆ ಕುರಿತು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಮೈಸೂರು ಮೂಲದ ಶರೀಫ್ ಎಂಬ ವ್ಯಕ್ತಿಯ ಕೊಲೆ ಹಾಗೂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಕುರಿತು ತನಿಖೆ ತೀವ್ರಗೊಳಿಸಿದ ವೇಳೆ ಘಟನೆ ಹಿಂದೆ ಆರೇಳು ಮಂದಿ ಇರುವುದು ಕಂಡುಬಂದಿದೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿರುವ ಕೇರಳಾದ ಮಲ್ಲಪುರಂ ಜಿಲ್ಲಾ ಪೊಲೀಸರು ಇದಕ್ಕಾಗಿ ವಿಶೇಷ ತಂಡ ರಚಿಸಿ ತನಿಖೆ ಮುಂದುವರೆಸಿದ್ದಾರೆ.

ಬೊಗಾದಿ ನಿವಾಸಿ ಶಾಬಾದ್‌ ಶರೀಫ್ ನಾಪತ್ತೆ ಸಂಬಂಧ ನಗರದ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಪೊಲೀಸರು ಎಲ್ಲಾ ಆಯಮದಲ್ಲೂ ಶೋಧ ನಡೆಸಿದ್ದರು ವ್ಯಕ್ತಿ ಪತ್ತೆಯಾಗಿರಲಿಲ್ಲ. ಈಗ ಕೇರಳದಲ್ಲಿ ಹತ್ಯೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಮೈಸೂರು ಡಿಸಿಪಿ ಪ್ರದೀಪ್‌ ಗುಂಟಿ ತಿಳಿಸಿದ್ದಾರೆ.

Leave A Reply

Your email address will not be published.