ಮದುವೆ ನಿಶ್ಚಯವಾಗಿದ್ದ ವರ ಸಾವು| ಮನನೊಂದು ವಧು ಆತ್ಮಹತ್ಯೆ: ‘ಪ್ರೇಮ್ ಕಹಾನಿ’ ಯ ದುರಂತ ಅಂತ್ಯ

‘ಪ್ರೀತಿ’ ಇದರ ಪಾಶದಲ್ಲಿ ಬಿದ್ದರೆ ಹೊರಗೆ ಬರುವುದು ಕಷ್ಟ. ಅದರಲ್ಲೂ ನಿಷ್ಕಲ್ಮಶ ಪ್ರೀತಿಯಂತೂ ಶ್ರೇಷ್ಠ. ಯಾರಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತೋ ನಿಜಕ್ಕೂ ಪುಣ್ಯವಂತರೆಂದೇ ಹೇಳಬಹುದು. ಅಂಥದ್ದೇ ಒಂದು ಪ್ರೀತಿಯ ಕಥೆ ಇದು.

ಎರಡು ವರ್ಷಗಳಿಂದ ಬಹಳ ಇಷ್ಟ ಪಟ್ಟು ಪ್ರೀತಿಸಿ, ತಮ್ಮ ಪ್ರೀತಿಯನ್ನು ಮನೆಯವರಿಗೂ ತಿಳಿಸಿ, ಮದುವೆಗೆ ಮನೆಯವರನ್ನೂ ಒಪ್ಪಿಸಿದ್ದ ಜೋಡಿ ಮದುವೆ ತಯಾರಿಯಲ್ಲಿತ್ತು. ಇವರ ಖುಷಿಗೆ ಎಲ್ಲೆ ಇರಲಿಲ್ಲ. ಆದರೆ ಇವರ ಬಾಳಲ್ಲಿ ಒಮ್ಮೆಲೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹೌದು ಮದುವೆಯಾಗಬೇಕಾಗಿದ್ದ ಪ್ರಿಯಕರ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಆತನ ಸಾವಿನ ನೋವು ಪ್ರಿಯತಮೆಯನ್ನು ಸ್ತಬ್ಧ ಮಾಡಿಸಿತ್ತು. ಹಾಗಾಗಿ ಆ ಯುವತಿನೂ ಆತನ ಹಿಂದೆ ಹೋಗಿದ್ದಾಳೆ. ಅವರಿಬ್ಬರೂ ಈಗ ಸಾವಿನಲ್ಲಿ ಒಂದಾಗಿದ್ದಾರೆ.

ಮದುವೆಯಾಗ ಬೇಕಾಗಿದ್ದ ಜೋಡಿ ದಾರುಣ ಸಾವನ್ನಪ್ಪಿರುವಂತಹ ಹೃದಯ ವಿದ್ರಾವಕ ಘಟನೆ ತುಮಕೂರು ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ. ಮೇ 11ರಂದು ಹುಡುಗ ಸಾವನ್ನಪ್ಪಿದ್ರೆ ನಿನ್ನೆ ರಾತ್ರಿ ಯುವತಿ ಸಾವನ್ನಪ್ಪಿದ್ದಾಳೆ. ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು. ಮೇ 11ರಂದು ನೆಲಮಂಗಲ ಕುಲಾನಹಳ್ಳಿ ಬಳಿ ನಡೆದ ಅಪಘಾತದಲ್ಲಿ ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ ಮೃತಪಟ್ಟಿದ್ದಾನೆ. ತುಮಕೂರು ತಾಲ್ಲೂಕಿನ ಅರೆಹಳ್ಳಿ ಗ್ರಾಮದ ಸುಷ್ಮಾ ಸಾವಿನ ಸುದ್ದಿಕೇಳಿ ಆಘಾತಗೊಂಡಿದ್ದು, ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ.

ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಸುಷ್ಮಾ ಅಂದಿನಿಂದ ಧುನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದಳು. ಧನುಷ್ ಸಾವಿನಿಂದ ನೊಂದು ನಿನ್ನೆ ಯುವತಿ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಷ ಸೇವಿಸಿದ್ದ ಯುವತಿ ಸುಷ್ಮಾ, ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ 8ಗಂಟೆ ಸುಮಾರಿನಲ್ಲಿ ಸಾವೀಗಿಡಾಗಿದ್ದಾಳೆ. ಸುಷ್ಮಾ ಎಂಕಾಂ ವಿದ್ಯಾಭ್ಯಾಸ ಮಡುತ್ತಿದ್ದಳು. ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದ ಧನುಷ್. ಊರಿನ ಜಾತ್ರೆಗೆ ಬರುವ ವೇಳೆ ಅಪಘಾತ ನಡೆದು ಧನುಷ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಪ್ರೀತಿ ವಿಚಾರ ಗೊತ್ತಾಗಿ ಮನೆಯವರು ಇಬ್ಬರಿಗೂ ಮದುವೆ ನಿಶ್ಚಯ ಮಾಡಿದ್ದರು. ಹೆಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave A Reply

Your email address will not be published.