ಕುಮಾರಸ್ವಾಮಿಯನ್ನು ಗೆಲ್ಲಿಸಿ ಎಂದು ಮದುವೆಯಲ್ಲಿ ಪೋಸ್ಟರ್ ಹಿಡಿದು ಮನವಿ ಮಾಡಿದ ವಧು-ವರರು !!- ಫೋಟೋ ವೈರಲ್

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಪಕ್ಷಗಳು ಮತದಾರರ ಮನವೊಲಿಕೆಗೆ ಈಗಾಗಲೇ ಮನೆಬಾಗಿಲಿಗೆ ಬರಲು ಸಿದ್ಧವಾಗಿವೆ. ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಇನ್ನುಳಿದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಚುನಾವಣಾ ರಣತಂತ್ರ ರೂಪಿಸುವಲ್ಲಿ ನಿರತವಾಗಿವೆ.

ಈ ಬಾರಿ ನಾವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆಂದು ಹೇಳಿರುವ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ನೂರಕ್ಕೆ ನೂರರಷ್ಟು ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆಂದು ಕಾಂಗ್ರೆಸ್ ಸಹ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ನಾವೇನು ಕಮ್ಮಿ ಇಲ್ಲ ಎಂಬಂತೆ ಜನತಾ ಜಲಧಾರೆ ಮೂಲಕ ಮಿಷನ್ 123 ಯುದ್ಧ ಆರಂಭವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಜೋಡಿಯೊಂದು ಎಚ್‍ಡಿಕೆಗೆ ಮತ ಹಾಕುವಂತೆ ಮನವಿ ಮಾಡಿರುವುದು ಗಮನ ಸೆಳೆಯುತ್ತಿದೆ.

ಹೌದು. ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿಯೊಂದು ತಮ್ಮ ಮದುವೆ ಸಮಾರಂಭದಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ಜಪ ಮಾಡಿದೆ. ವೇದಿಕೆಯಲ್ಲಿ ಕುಮಾರಣ್ಣನನ್ನು ಬೆಂಬಲಿಸಿ ಎಂದು ವಧು-ವರ ಭಿತ್ತಿ ಪತ್ರ ಪ್ರದರ್ಶನ ಮಾಡಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ‘ರಾಜ್ಯದ ಸಮಗ್ರ ನೀರಾವರಿಗಾಗಿ 2023ರ ಚುನಾವಣೆಯಲ್ಲಿ ಕುಮಾರಣ್ಣನಿಗೆ ಬೆಂಬಲಿಸಿ’ ಎಂದು ತುಂಬಾನೇ ಅಭಿಮಾನದಿಂದ ಮನವಿ ಮಾಡಿದ್ದಾರೆ.

ಜಗದೀಶ್ ನೀಡಗುಂದಿಮಠ ಮತ್ತು ಪೂಜಾ ಎನ್ನುವ ನೂತನ ವಧು-ವರರು ತಮಗೆ ಆಶೀರ್ವಾದ ಮಾಡಲು ಬಂದ ಸಂಬಂಧಿಕರು, ಬಂಧು-ಬಳಗಕ್ಕೆ ಕುಮಾರಣ್ಣನಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಕೂಡ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿಯನ್ನು ಗೆಲ್ಲಿಸುವಂತೆ ಕೋರಿದ್ದ ಸುದ್ದಿ ಭಾರೀ ವೈರಲ್ ಆಗಿತ್ತು. ಅಂತೆಯೇ ಇದೀಗ ಭಿತ್ತಿ ಪತ್ರವನ್ನು ಹಿಡಿದು ಎಚ್‍ಡಿಕೆ ಬೆಂಬಲಿಸಿರುವ ವಧು-ವರರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave A Reply

Your email address will not be published.