ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ : ಆರೋಪಿ ನಾಗೇಶ್ ಮೇಲೆ ಪೊಲೀಸರಿಂದ ಫೈರಿಂಗ್!

ಬೆಂಗಳೂರಿನ ಸುಂಕದಕಟ್ಟೆಯ ಬಳಿ ಕೆಲಸಕ್ಕೆಂದು ಹೋಗುತ್ತಿದ್ದ ಯುವತಿಯ ಮೇಲೆ ಅಲ್ಲೇ ಕಾದು ಕುಳಿತಿದ್ದ ಪಾಗಲ್ ಪ್ರೇಮಿ ನಾಗ ಎಂಬಾತ, ಯುವತಿಯ ಮೇಲೆ ಆ್ಯಸಿಡ್ ಎರಚಿದ್ದ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈ ಘಟನೆ ಸಿಲಿಕಾನ್ ಸಿಟಿಯನ್ನೇ ತಲ್ಲಣಗೊಳಿಸಿತ್ತು.

ಆ್ಯಸಿಡ್ ಎರಚಿದ ವ್ಯಕ್ತಿ ನಾಗ ಪರಾರಿಯಾಗಿ, ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೊಲೀಸರು ಶತ ಪ್ರಯತ್ನ ನಡೆಸಿದ್ದರು. ನಿನ್ನೆಯಷ್ಟೇ ಆ್ಯಸಿಡ್ ನಾಗನನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆತರುತ್ತಿದ್ದರು. ಆದರೆ ಆತನನ್ನು ಕರೆತರುವ ಸಮಯದಲ್ಲಿ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ನಾಗೇಶ್ ಪೊಲೀಸರಿಗೆ ಕೇಳಿದ್ದಾನೆ. ಈ ವೇಳೆ ಪೊಲೀಸರು ನೈಸ್ ರಸ್ತೆ ಬಳಿ ನಿಲ್ಲಿಸದೇ ಕೆಂಗೇರಿಯ ಬಳಿ ವಾಹನ ನಿಲ್ಲಿಸಿದ್ದರು.

ಪೊಲೀಸರು ವಾಹನ ನಿಲ್ಲಿಸಿದ್ದ ವೇಳೆ ನಾಗೇಶ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ತಡೆಯಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಕಾಮಾಕ್ಷಿ ಪಾಳ್ಯದ ಇನ್ಸ್ ಪೆಕ್ಟರ್ ಪ್ರಶಾಂತ್ ಗಾಳಿಯಲ್ಲಿ ಗುಂಡು ಹಾರಿಸಿ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರೂ ನಾಗೇಶ್ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ನಾಗೇಶ್ ಬಲಗಾಲಿಗೆ ಇನ್ಸ್ ಪೆಕ್ಟರ್ ಪ್ರಶಾಂತ್ ಗುಂಡು ಹಾರಿಸಿದ್ದಾರೆ. ಸದ್ಯ ನಾಗೇಶ್ ನನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave A Reply

Your email address will not be published.