ಉದ್ಯೋಗ ಸಿಗದೆ ಮನನೊಂದು ಉಪ್ಪಿನಂಗಡಿಯ ಯುವತಿ ವಿಷ ಸೇವಿಸಿ ಆತ್ಮಹತ್ಯೆ !!

ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯ ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದಲ್ಲಿ ನಡೆದಿದೆ.

ಕೊಯಿಲ ಗ್ರಾಮದ ಸುದೆಂಗಳ ನಿವಾಸಿ ಸುಂದರ ಮಡಿವಾಳ ಅವರ ಪುತ್ರಿ ಸಹನಾ (23) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ.

ಕಾಪು ತಾಲೂಕಿನ ಕಟ್ಟಿಂಗೇರಿಯ ಅಕ್ಕನ ಮನೆಗೆ ಬಂದಿದ್ದ ಸಹನಾ ವಿಷ ಸೇವಿಸಿದ್ದಳು. ವಾಂತಿಯಾದಾಗ ಪುಡ್ ಫಾಯಿಸನ್ ಆಗಿದೆ ಎಂದು ಹೇಳಿ ವಿಷ ಪದಾರ್ಥ ಸೇವಿಸಿರುವುದನ್ನು ಮುಚ್ಚಿಟ್ಟಿದ್ದಳು. ಆದರೂ ಪದೇ ಪದೇ ವಾಂತಿಯಾಗತೊಡಗಿದಾಗ ಸಂಶಯಗೊಂಡ ಮನೆಯವರು ಆಕೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. 10 ದಿನ ಚಿಕಿತ್ಸೆಯಲ್ಲಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಅರ್ಹತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ನೊಂದಿದ್ದ ಸಹನಾ ವಿಷ ಸೇವಿಸಿದ್ದಳು. ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಎಂಬಿಎ ಮಾಡಿದ್ದ ಸಹನಾ, ಉದ್ಯೋಗಕ್ಕಾಗಿ ಅಲೆದಾಡಿದ್ದಳು. ಆದರೆ, ಎಲ್ಲಿಯೂ ತನ್ನ ಅರ್ಹತೆಗೆ ತಕ್ಕ ಕೆಲಸ ಸಿಗದಿದ್ದರಿಂದ ಮನನೊಂದು ವಿಷ ಸೇವಿಸಿದ್ದಳು. ಮೂರು ಆಸ್ಪತ್ರೆಗಳಲ್ಲಿ 10 ದಿನ ಸಹನಾಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಎಲ್ಲವೂ ವಿಫಲವಾಗಿದೆ. ಇನ್ನು ಸಹನಾ ಸಾವು ಸಂಬಂಧ ಉಡುಪಿಯ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕಾಂಗ್ರೆಸ್ ಇಂದು ಸಂಜೆ ಉಡುಪಿಯಲ್ಲಿ ಪ್ರತಿಭಟನೆ ನಡೆಸಲಿದೆ. ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರಕಾರ ಯುವಕರಿಗೆ ಉದ್ಯೋಗ ಸೃಷ್ಟಿಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ.

Leave A Reply

Your email address will not be published.