ಚಲಿಸುವ ಲಿಫ್ಟ್ ನಲ್ಲಿ ತಲೆ ಸಿಲುಕಿ ಉದ್ಯೋಗಿ ದಾರುಣ ಸಾವು

ಲಿಫ್ಟ್ ನಲ್ಲಿ ಸರಕುಗಳನ್ನು ಸಾಗಿಸುವಾಗ ವ್ಯಕ್ತಿಯೋರ್ವನ ತಲೆ ಲಿಫ್ಟ್ ಬಾಗಿಲಿನ ಮಧ್ಯೆ ಸಿಲುಕಿಕೊಂಡು, ಮೃತಪಟ್ಟ ದಾರುಣ ಘಟನೆಯೊಂದು ತಿರುವನಂತಪುರದಲ್ಲಿ ನಡೆದಿದೆ.

ನೇಮೊಮ್ ನಿವಾಸಿ ಸತೀಶ್ ಕುಮಾರ್(54) ಎಂಬಾತನೇ ಈ ಅವಘಡಕ್ಕೆ ಸಿಲುಕಿ ಮೃತನಾದ ವ್ಯಕ್ತಿ.
ಅಂಬಲಮುಕ್ಕಿನಲ್ಲಿರುವ ಸ್ಯಾನಿಟರಿ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ ಸತೀಶ್ ಕುಮಾರ್ ಅವರು ನೆಲಮಹಡಿ ಮತ್ತು 4ನೇ ಮಹಡಿ ನಡುವಿನ ಕಾರ್ಗೋ ಲಿಫ್ಟ್ ನಲ್ಲಿ ಸರಕುಗಳನ್ನು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸತೀಶ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ಈ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ಒಬ್ಬರೇ ಲಿಫ್ಟ್‌ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ.

ಎಷ್ಟೊತ್ತಾದರೂ ಸತೀಶ್ ಕುಮಾರ್ ಬರದಿದ್ದನ್ನು ನೋಡಿದ ಇತರ ಸಿಬ್ಬಂದಿ ಸಂಶಯಗೊಂಡು ಲಿಫ್ಟ್ ನ ಹತ್ತಿರ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ತಿರುವನಂತಪುರಂ ಘಟಕದ ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಲಿಫ್ಟ್‌ನಲ್ಲಿದ್ದಾಗ ಏನನ್ನೋ ಪರೀಕ್ಷಿಸಲು ಆತ ಕುತ್ತಿಗೆಯನ್ನು ಹೊರಗೆ ಹಾಕಿರಬಹುದು. ಈ ಸಮಯದಲ್ಲಿ ಲಿಫ್ಟ್ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ಅಗ್ನಿ ಶಾಮಕ ದಳದ ತಂಡ ಲಿಫ್ಟ್‌ನಿಂದ ಹೊರ ತೆಗೆಯುವ ವೇಳೆಗೆ ಆತ ಸಾವನ್ನಪ್ಪಿದ್ದನು ಎಂದು ತಿಳಿಸಿದ್ದಾರೆ.

Leave A Reply

Your email address will not be published.