ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದ ಮಹಿಳೆಯ ಜೀವ ಉಳಿಸಿದ ಕಣಜಗಳು !!

ನಾವೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತದೆ ಎಂಬ ಮಾತಿದೆ. ಅಂತೆಯೇ ಇಲ್ಲಿ ಸಾಯಲು ಹೊರಟಿದ್ದ ಮಹಿಳೆಯನ್ನು ಅಪಾಯಕಾರಿ ಕಣಜಗಳು ಆಕೆಯ ಪ್ರಾಣ ಉಳಿಸಿವೆ. ಹೌದು. ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಮೊಬೈಲ್ ಟವರ್ ಏರಿದ್ದು, ಆಕೆಯ ಪ್ರಾಣವನ್ನು ಕಣಜಗಳು ಉಳಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

ಏನಿದು ಕಣಜಗಳು ಮನುಷ್ಯರ ಪ್ರಾಣ ಉಳಿಸುತ್ತಾ? ಎಂದು ಯೋಚನೆ ಮಾಡುತ್ತಿದ್ದೀರಾ, ಆದರೆ ಇದು ನಿಜ. ಕೇರಳದಲ್ಲಿ ಮಹಿಳೆಯೊಬ್ಬಳು ಮೊಬೈಲ್ ಟವರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಾಗ ಆಕೆಯ ಸುತ್ತಲೂ ಕಣಜಗಳು ಸುತ್ತಿಕೊಂಡಿವೆ. ಈ ಹಿನ್ನೆಲೆಯಲ್ಲಿ ಗಾಬರಿಗೊಂಡ ಮಹಿಳೆ ಟವರ್‌ನಿಂದ ರಪರಪನೆ ಕೆಳಗೆ ಇಳಿದಿದ್ದಾಳೆ.

ಆತ್ಮಹತ್ಯೆಗೆ ಯತ್ನಿಸಲು ಕಾರಣ ??

ಮಹಿಳೆಯ ಮಗುವನ್ನು ಆಕೆಯ ಪತಿ ಕಸಿದುಕೊಂಡು ಹೋಗಿದ್ದಾನೆ. ಇದರಿಂದ ಮನನೊಂದ ಮಹಿಳೆ ಪತಿ ಕರೆದುಕೊಂಡು ಹೋಗಿದ್ದ ತನ್ನ ಮಗುವನ್ನು ವಾಪಸ್ ಕೊಡದಿದ್ದರೆ ನಾನು ಟವರ್ ಮೇಲಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳೆಯು ಕೇರಳದ ಆಲಪ್ಪುಳದ ಕರಾವಳಿಯ ಕಯಂಕುಲಂನಲ್ಲಿರುವ ಬಿಎಸ್‍ಎನ್‍ಎಲ್ ಮೊಬೈಲ್ ಟವರ್ ಏರಿದ್ದಳು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಕೆಯನ್ನು ಕೆಳಗಿಳಿಯುವಂತೆ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.

ಆದರೆ ಟವರ್‌ನಲ್ಲಿದ್ದ ಕಣಜಗಳು ಆಕೆಯನ್ನು ಸುತ್ತಿಕೊಂಡ ಕುಟುಕಲು ಪ್ರಾರಂಭಿಸುತ್ತವೆ. ಇದರಿಂದ ಗಾಬರಿಯಾದ ಮಹಿಳೆ ವೇಗವಾಗಿ ಟವರ್‌ನಿಂದ ಕೆಳಗಿಳಿಯಲು ಪ್ರಾರಂಭಿಸಿದಳು. ಆದರೆ ಕಣಜಗಳು ಆಕೆಯ ಸುತ್ತಲೂ ಹಿಂಡು-ಹಿಂಡಾಗಿ ಬಂದು ಕುಟುಕುತ್ತಿದ್ದ ಪರಿಣಾಮ ಆಕೆ ಕಿರುಚಲು ಪ್ರಾರಂಭಿಸುತ್ತಾಳೆ. ನಂತರ ಆಕೆಯ ಸಮೀಪವೇ ಅಗ್ನಿಶಾಮಕ ದಳದ ಸಿಬ್ಬಂದಿ ಭದ್ರವಾಗಿ ಸುರಕ್ಷತಾ ಜಾಲ ಹಿಡಿದುಕೊಂಡಿದ್ದು, ಆಕೆ ಅದರ ಮೇಲೆ ಹಾರಿದಳು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಣಜಗಳು ಇಲ್ಲದೇ ಇದ್ದಿದ್ದರೆ ಆ ಮಹಿಳೆ ಕೆಳಗಿಳಿಯುತ್ತಿರಲಿಲ್ಲ. ಆಕೆ ತಮಿಳುನಾಡಿನ ನಿವಾಸಿಯಾಗಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಪತಿ ಮತ್ತು ಸಂಬಂಧಿಕರನ್ನು ಸಂಪರ್ಕಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಮಹಿಳೆ ಚೇತರಿಸಿಕೊಂಡ ಮೇಲೆ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

Leave A Reply

Your email address will not be published.