ಅಕ್ರಮ ಸಂಬಂಧದ ಮೋಹ, ಕಾಮದಾಸೆಗೆ ಸಪ್ತಪದಿ ತುಳಿದ ಗಂಡನ ಪ್ರಾಣವನ್ನೇ ಬಲಿ ಕೊಟ್ಟ ಪತ್ನಿ|

ಜೀವನ ಪೂರ್ತಿ ಜೊತೆಯಾಗಿ ಇರುತ್ತೇನೆ ಎಂದು ಪ್ರಮಾಣ ಮಾಡಿದ ಪತ್ನಿ ಕಾಮದಾಸೆಗೆ, ಅನೈತಿಕ ಸಂಬಂಧದ ಮೋಹಕ್ಕೆ ಒಳಗಾಗಿ, ಕೆಲಸಕ್ಕೆಂದು ಜೊತೆಗೆ ಹೋದ ಗಂಡನನ್ನು ಮಧ್ಯ ದಾರಿಯಲ್ಲೇ ಕತ್ತು ಹಿಸುಕಿ ಕೊಲೆಗೈದಿದ್ದಾಳೆ.

ಕಳೆದ ಏಪ್ರಿಲ್ 24ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀರದಿಮ್ಮನಹಳ್ಳಿ ಗ್ರಾಮದ ಗೋಪಾಲ್ ನಾಯ್ಕ ಎಂಬ ವ್ಯಕ್ತಿ ಮೂರ್ಛೆ ರೋಗ ಬಂದು ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿತ್ತು. ನನಗ್ಯಾರು ಗತಿ ಅಂತ ರೋಧಿಸುತ್ತಲೇ ಮೃತ ದೇಹವನ್ನು ವೀರದಿಮ್ಮನ ಹಳ್ಳಿಗೆ ತೆಗೆದುಕೊಂಡು ಹೋಗಿ ಕುಟುಂಬದವರ ಮುಂದೆ ಮೂರ್ಛೆ ರೋಗದಿಂದ ನನ್ನ ಗಂಡ ಸತ್ತ ಅಂತ ಹೆಂಡತಿ ಹೇಳಿದ್ದಳು. ಇವಳ ಈ ಆಕ್ರಂದನಕ್ಕೆ ಕರಗಿದ ಗ್ರಾಮದ ಜನರು ಆಕೆಯನ್ನ ಸಮಾಧಾನ ಪಡಿಸಿ ಸಾಂತ್ವನ ಹೇಳಿದರು. ಬಳಿಕ ಸಂಪ್ರದಾಯದಂತೆ ಮೃತದೇಹವನ್ನು ಸುಟ್ಟು ಅಂತ್ಯಕ್ರಿಯೆ ಕೂಡಾ ಮಾಡಿದ್ದರು.

ಇದಾದ ನಂತರ ಗೋಪಾಲ್ ಸಾವಿಗೆ ಪತ್ನಿ ಚಂದ್ರಕಲಾಳ ಅಕ್ರಮ ಸಂಬಂಧದ ದಾಹ ಕಾರಣ ಅನ್ನೋದು ಗಾಳಿಯಲ್ಲಿ ಹರಿದಾಡುತ್ತಿತ್ತು. ಆ ಮಾತು ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಸಾಗಿ ಸಾವನ್ನಪ್ಪಿದ್ದ ಗೋಪಾಲನಾಯ್ಕನ ಕುಟುಂಬಕ್ಕೂ ಕೇಳಿತ್ತು. ಅಲ್ಲಿಗೆ ಗೋಪಾಲ ನಾಯ್ಕ ಸಾವಿಗೆ ಟ್ವಿಸ್ಟ್ ಸಿಕ್ಕಿದಂತಾಗಿತ್ತು.

ಗೋಪಾಲ್ ಅಕ್ಕ ಲಕ್ಷ್ಮಿ ಬಾಯಿ ತಮ್ಮನ ಸಾವು ಸಹಜವಲ್ಲ, ಅದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ಚಳ್ಳಕೆರೆ ಪೋಲೀಸ್ ಠಾಣೆಗೆ ದೂರನ್ನು ನೀಡಿದ್ದರು. ದೂರು ದಾಖಲಿಸಿಕೊಂಡ ಪೋಲೀಸರು ಚಂದ್ರಕಲಾಳನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದರು ನೋಡಿ, ಆವಾಗ ಬಂತು ಶಾಕಿಂಗ್ ಕಾರಣ. ಆಕೆ ಹೇಳಿದ ಸತ್ಯ ಪೋಲೀಸರನ್ನೂ ಒಂದು ಕ್ಷಣ ಆಶ್ಚರ್ಯ ಪಡುವಂತೆ ಮಾಡಿತ್ತು.

11 ವರ್ಷಗಳ ಹಿಂದೆ ತನ್ನ ಅಕ್ಕನ ಮಗಳನ್ನು ಒಪ್ಪಿ ಕುಟುಂಬದವರ ಸಮ್ಮುಖದಲ್ಲಿ ಅಕ್ಕನ ಮಗಳು ಚಂದ್ರಕಲಾಳನ್ನು ಗೋಪಾಲನಾಯ್ಕ ಮದುವೆಯಾಗಿದ್ದ. ನನ್ನನ್ನೇ ನಂಬಿ ಬಂದ ಪತ್ನಿಯನ್ನು ಸುಖ ಸಂತೋಷದಿಂದ ನೋಡಬೇಕು ಅನ್ನೋ ಭಾವನೆ ಗಂಡನದ್ದಾಗಿತ್ತು. ಹಾಗಾಗಿ ಗೋಪಾಲನಾಯ್ಕ ಕಿರಾಣಿ ಅಂಗಡಿ ಕೆಲಸಕ್ಕೆ ಹೋಗುತ್ತಿದ್ದ, ಅದರ ಸಂಬಳದಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು.

ಇಬ್ಬರು ಮಕ್ಕಳಾದ ನಂತರ ಖರ್ಚು ಜಾಸ್ತಿಯಾಗಿತ್ತು. ಹಾಗಾಗಿ ಮತ್ತಷ್ಟು ದುಡಿಮೆ ಇವರಿಗೆ ಅನಿವಾರ್ಯ ಆಗಿತ್ತು. ಇದೇ ಕಾರಣಕ್ಕೆ ಚಂದ್ರಕಲಾ ಗ್ರಾಮದ ಮಹಿಳಾ ಸಂಘಗಳ ಮೂಲಕ ಸಾಲ ಪಡೆದು ಹಳ್ಳಿ ಹಳ್ಳಿಗಳಿಗೆ ಆಟೋದಲ್ಲಿ ತೆರಳಿ ತರಕಾರಿ ಮಾರಾಟ ಮಾಡಿ ಜೀವನ ಕಟ್ಟಿಕೊಳ್ಳೋಕೆ ಪ್ಲ್ಯಾನ್ ಮಾಡಿದ್ದ. ಅದರಂತೆ ತರಕಾರಿ ವ್ಯಾಪಾರ ಪ್ರಾರಂಭ ಮಾಡಿ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿ ಬರ್ತಿದ್ರು.

ಜೀವನ ಚೆನ್ನಾಗಿ ಸಾಗ್ತಿತ್ತು. ಅದು ಬಹಳಷ್ಟು ದಿನ ಸಾಗಲಿಲ್ಲ. ಏಕೆಂದರೆ ಕಳೆದ ಎರಡು ವರ್ಷಗಳಿಂದ ಸಾಲ ಕೊಟ್ಟಿದ್ದ ಫೈನಾನ್ಸ್ ನ ರಾಜಶೇಖರ್ ಅನ್ನೋ ವ್ಯಕ್ತಿ ಗೋಪಾಲನ ಹೆಂಡತಿ ಜೊತೆ ಸಲಿಗೆ ಬೆಳಸಿಕೊಂಡಿದ್ದನು. ಅಲ್ಲದೇ ಇನ್ನು ವಿವಾಹ ಆಗದೆ ಇದ್ದ ರಾಜಶೇಖರ್ ಆಕೆಯನ್ನು ಮದುವೆ ಆಗೋಣ ಅಂತ ಹೇಳಿದ್ದನಂತೆ. ಹಾಗಾಗಿ ಆರೋಪಿ ಚಂದ್ರಕಲಾ ಕಾಮದ ಆಸೆಗೆ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಮದುವೆ ಆಗುವ ಕನಸು ಕಟ್ಟಿದ್ದಳು.

ಇದರಿಂದ ಕೈ ಹಿಡಿದ ಗಂಡನ ಜೊತೆ ಜಗಳವಾಗುತ್ತಿತ್ತು. ಪತಿ ಗೋಪಾಲ್ ನಾಯ್ಕನಿಗೆ ಇವರಿಬ್ಬರ ನಡುವೆ ಅಕ್ರಮ ಸಂಬಂಧವಿದೆ ಅನ್ನೋ ಸುಳಿವು ಗೊತ್ತಾಗಿತ್ತು. ಆದರೆ ಅವರನ್ನು ದೂರ ಮಾಡೋಕೆ ಆಗಿರ್ಲಿಲ್ಲ. ಅದರ ಬದಲಾಗಿ ಪತ್ನಿಯನ್ನೂ ತರಕಾರಿ ವ್ಯಾಪಾರಕ್ಕೆ ಕರೆದುಕೊಂಡು ಹೋಗುತ್ತಿದ್ದನಂತೆ.

ಏಪ್ರಿಲ್ 20 ರ ಬೆಳಗ್ಗೆ ಎಂದಿನಂತೆ ತರಕಾರಿ ಮಾರಾಟಕ್ಕೆ ಆಟೋದಲ್ಲಿ ತೆರಳಿದ್ದ ಗೋಪಾಲ್, ಪತ್ನಿ ಚಂದ್ರಕಲಾ ವಾಪಾಸ್ ಬರುವ ಮಾರ್ಗ ಮಧ್ಯೆ ಆಟೋದ ಗ್ಯಾಸ್ ಖಾಲಿ ಆಗಿತ್ತು. ಅದನ್ನೇ ನೆಪವಾಗಿ ಮಾಡಿದ ಚಂದ್ರಕಲಾ ತನ್ನ ಪ್ರಿಯಕರ ರಾಜಶೇಖರ್ ನಿಗೆ ಫೋನ್ ಮಾಡಿ ಬೈಕ್ ತರಿಸಿದ್ದಳು. ಬಳಿಕ ಮೂವರೂ ಸೇರಿ ಯಲಗಟ್ಟ ಗೊಲ್ಲರಹಟ್ಟಿಯ ಒಂದು ಮನೆಯ ಬಳಿಗೆ ಆಟೋ ತಳ್ಳಿಕೊಂಡು ಹೋಗಿ ಅಲ್ಲೇ ಬಿಟ್ಟು ಬೈಕಲ್ಲಿ ಊರಿಗೆ ಬರ್ತಾ ಇದ್ದರು. ಆದರೆ ನಂತರ ಅಲ್ಲಿಗೆ ಬಂದಿದ್ದು ರಾಜಶೇಖರ್ ಅಂತ ತಿಳಿದ ಗೋಪಾಲ್ ಪತ್ನಿ ಚಂದ್ರಕಲಾ ಜೊತೆ ಜಗಳ ಮಾಡಿದ್ದಾನೆ.

ಮಾರ್ಗ ಮಧ್ಯೆನೇ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದೆ. ಕೂಡಲೇ ಹೆಂಡತಿ ಮತ್ತು ರಾಜಶೇಖರ್ ಗೋಪಾಲ್ ನನ್ನು ತಳ್ಳಿ ನೆಲಕ್ಕೆ ಬೀಳಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಇದರಿಂದ ತಪ್ಪಿಸಿಕೊಳ್ಳಲು ಕೊಲೆಯಾಗಿದ್ದ ಮೃತ ದೇಹವನ್ನು ಚಳ್ಳಕೆರೆ ಆಸ್ಪತ್ರೆಗೆ ಬಂದು ಮೂರ್ಛೆ ರೋಗ ಬಂದಿದೆ ಚಿಕಿತ್ಸೆ ಕೊಡಿ ಅಂತ ವೈದ್ಯರನ್ನು ಕೇಳಿದ್ದಾರೆ.

ಮೊದಲೇ ಮೃತಪಟ್ಟಿದ್ದ ಗೋಪಾಲ್ ನಾಯಕ್ ನನ್ನು ನೋಡಿ ಈ ವ್ಯಕ್ತಿ ಬರುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ ಅಂತ ಡಾಕ್ಟರ್ ಹತ್ತಿರ ಹೇಳಿದ್ದರು. ಆ ಸಮಯಕ್ಕೆ ವೈದ್ಯರಿಗೂ ತಿಳಿಯದೆ ಅದನ್ನ ಸರ್ಟಿಫೈ ಮಾಡಿದ್ದರು. ಬಳಿಕ ಮೃತದೇಹವನ್ನ ಸುಟ್ಟು ಅಂತ್ಯಕ್ರಿಯೆ ಮಾಡಿದ್ದ ಚಂದ್ರಕಲಾ ಪ್ರಿಯಕರನ ಜೊತೆ ಮದುವೆ ಆಗಿ ಹೋಗಬೇಕು ಎಂಬ ಪ್ಲ್ಯಾನ್ ಮಾಡಿದ್ದಳು. ಆದರೇ ಸತ್ಯ ಬಯಲಾಗಿ ಮಾಡಿದ ತಪ್ಪಿಗೆ ಪ್ರಿಯಕರನ ಜೊತೆ ತಾನೂ ಜೈಲು ಸೇರಿದ್ದಾಳೆ.

Leave A Reply

Your email address will not be published.