ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ

ದಯಾನಂದ ಜಾಲು, ಜನಾರ್ದನ ಗೌಡ ಕಂಡಿಪ್ಪಾಡಿ, ಮಹಮ್ಮದ್ ಕುಂಡಡ್ಕ ನಾಮಪತ್ರ ಹಿಂತೆಗೆತ

ಚುನಾವಣೆ ಇಲ್ಲದೆ ಅವಿರೋಧ ಆಯ್ಕೆಗೆ ಒಮ್ಮತದ ನಿರ್ಧಾರ

ಮುಕ್ಕೂರು : ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ರವಿವಾರ ಮೂವರು ನಾಮಪತ್ರ ಹಿಂಪಡೆದುಕೊಂಡಿದ್ದು ಇದರಿಂದ ಚುನಾವಣೆ ಇಲ್ಲದೆ ಅವಿರೋಧ ಆಯ್ಕೆಗೆ ದಾರಿ ಸುಗಮಗೊಂಡಿದೆ.

ಒಟ್ಟು 10 ಸ್ಥಾನಗಳಿಗೆ 13 ನಾಮಪತ್ರ ಸಲ್ಲಿಕೆಯಾಗಿತ್ತು. ಇದರಲ್ಲಿ ಮಹಿಳಾ ಮೀಸಲು ವರ್ಗದ ಎರಡು ಸ್ಥಾನಗಳಿಗೆ ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿರುವ ಕಾರಣ ಈ ಮೂರು ಸ್ಥಾನ ಅವಿರೋಧ ಆಯ್ಕೆ ನಡೆಯಲಿತ್ತು. ಉಳಿದಂತೆ 7 ಸಾಮಾನ್ಯ ಸ್ಥಾನಗಳಿಗೆ ಒಟ್ಟು 10 ನಾಮಪತ್ರ ಸಲ್ಲಿಕೆಯಾದ ಕಾರಣ ನಾಮಪತ್ರ ಹಿಂಪಡೆತದ ಕೊನೆಯ ದಿನದ ಬೆಳವಣಿಗೆಯ ಮೇಲೆ ಚುನಾವಣೆಯೋ ಅಥವಾ ಅವಿರೋಧ ಆಯ್ಕೆಯೋ ಎಂಬ ಬಗ್ಗೆ ನಿರ್ಧಾರವಾಗಲಿತ್ತು. ಮೇ 9 ರಂದು ಮೂವರು ನಾಮಪತ್ರ ಹಿಂಪಡೆದು ಅವಿರೋಧ ಆಯ್ಕೆಗೆ ಬೆಂಬಲ ನೀಡಿದರು.

ಸ್ವಯಂಪ್ರೇರಿತರಾಗಿ
ನಾಮಪತ್ರ ಹಿಂಪಡೆತ
ಚುನಾವಣೆ ಇಲ್ಲದೆ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ ಸದಸ್ಯರು ತಮ್ಮೊಳಗೆ ಮಾತುಕತೆ ನಡೆಸಿ ಅವಿರೋಧ ಆಯ್ಕೆಗೆ ಒಲವು ತೋರಿದರು. ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ದಯಾನಂದ ಜಾಲು, ಜನಾರ್ದನ ಗೌಡ ಕಂಡಿಪ್ಪಾಡಿ, ಮಹಮ್ಮದ್ ಕುಂಡಡ್ಕ ಅವರು ಸ್ವಯಂಪ್ರೇರಿತರಾಗಿ ನಾಮಪತ್ರ ಹಿಂಪಡೆದುಕೊಂಡು 7 ಸದಸ್ಯರು ಅವಿರೋಧ ಆಯ್ಕೆ ಅವಕಾಶ ಕಲ್ಪಿಸುವ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಿದರು.

ಕಣದಲ್ಲಿ 10 ಮಂದಿ
ಸಾಮಾನ್ಯ ಸ್ಥಾನದಲ್ಲಿ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಸಂಘದ ನಿಕಟಪೂರ್ವ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ನಿಕಟ ಪೂರ್ವ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಗುಡ್ಡಪ್ಪ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು, ಕೇಶವ ಕೆ.ಎನ್.ಕಂಡಿಪ್ಪಾಡಿ, ಪ್ರೇಮನಾಥ ರೈ, ಮಹಿಳಾ ಮೀಸಲು ಸ್ಥಾನದಲ್ಲಿ ಸಾವಿತ್ರಿ ಚಾಮುಂಡಿಮೂಲೆ, ಸುಮಲತಾ ಮರಿಕೇಯಿ ಹಾಗೂ ಪರಿಶಿಷ್ಟ ಜಾತಿ ಮೀಸಲಿನ ಒಂದು ಸ್ಥಾನದಲ್ಲಿ ಪೂವಪ್ಪ ನಾಯ್ಕ ಅಡೀಲು ಕಣದಲ್ಲಿದ್ದು ಈ ಎಲ್ಲ ಸ್ಥಾನಗಳಿಗೆ ಪ್ರತಿ ಸ್ಪರ್ದಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆ ನಡೆಯಲಿದೆ.

Leave A Reply

Your email address will not be published.